ಗುರುವಾರ, ಸೆಪ್ಟೆಂಬರ್ 27, 2012

ನಾ ಓದಿದ ಪುಸ್ತಕ - ಕಪಿಲಿಪಿಸಾರ(KAPILIPISARA)

        ಕಪಿಲಿಪಿಸಾರ(ಕಪಿ=ಮಂಗ+ಲಿಪಿ=ಬರವಣಿಗೆ+ಸಾರ=ಸಾರಾಂಶ)

ನಾನು ಕಥೆ ಕಾದಂಬರಿ ಎಲ್ಲಾ ಓದೋಕೆ ಶುರು ಮಾಡಿದ್ದು PUC ಡುಮ್ಕಿ ಹೊಡ್ದಾಗ( To come out of depression ಎಂಬ ಹಣೆಪಟ್ಟಿ ಹೊತ್ತ್ಕೊಂಡು). ಆಗ ಹಿಡಿದ ಹುಚ್ಚು ಇನ್ನೂ ಬಿಟ್ಟಿಲ್ಲ/ವಾಸಿಯಾಗಿಲ್ಲ.

ನೆನ್ನೆಯಷ್ಟೇ ಒಂದು ರೋಚಕ ಕಾದಂಬರಿ ಎಂಬ ಉಪ ಶೀರ್ಷಿಕೆ(Sub Title) ಹೊತ್ತ, ನಿಜವಾಗಿಯೂ ಅಷ್ಟೇ ರೋಚಕತೆಯನ್ನು ಮೂಡಿಸೋ ಒಂದು ಪುಸ್ತಕ ಓದಿ ಮುಗಿಸಿದೆ.

ಓದಿ ಆಯ್ತು, ಪುಸ್ತಕ ತುಂಬಾನೇ ಇಷ್ಟ ಆಯ್ತು. ಈಗ ನಿಮಗೆ ಕೊರೆಯೋಣ ಅಂತ.

ಪ್ರಕಾಶ್ ಕಂಬತ್ತಳ್ಳಿ ಅವರ ಅಂಕಿತ ಪುಸ್ತಕ ದಿಂದ ಪ್ರಕಟಗೊಂಡಿರುವ, ಕಪಿಲಿಪಿಸಾರವು ಡಾ.ಕೆ.ಎನ್.ಗಣೇಶಯ್ಯ ಎಂಬ ಕೃಷಿ ವಿಜ್ಞಾನಿಯ ಕೂಸು.

ಸ್ನೇಹಿತ ಶಶಾಂಕ್ ಬರೆದಿದ್ದ ಬ್ಲಾಗ್ ಓದಿ, ಗಣೇಶಯ್ಯನವರ ಶಾಲಭಂಜಿಕೆ ಪುಸ್ತಕ ಹುಡುಕಿ ತಂದೆ.(http://shashanksoghal.blogspot.in/search?updated-min=2011-01-01T00:00:00%2B05:30&updated-max=2012-01-01T00:00:00%2B05:30&max-results=9). ಕೊಟ್ಟ 80ರೂ. ಗಳಿಗಂತೂ ಮೋಸ ಆಗ್ಲಿಲ್ಲ(ಒಂದೇ ದಿನದಲ್ಲಿ ಓದಿ ಮುಗಿಸಿದೆ). ಅದಾದ ಮೇಲೆ ಅವರ ಇನ್ನೂ 4 ಪುಸ್ತಕಗಳನ್ನು ಕೊಂಡು ತಂದು, ಈಗಷ್ಟೇ ಕಪಿಲಿಪಿಸಾರವನ್ನು ಮುಗಿಸಿದೆ.

ಗಣೇಶಯ್ಯನವರು ಕಥೆ ಹೆಣೆಯುವ ರೀತಿಯೇ ಸೊಗಸು. ಒಂಥರಾ ಉಪೇಂದ್ರ ಸಿನೆಮಾ ಇದ್ದಂತೆ. ರೀಲ್ ಮತ್ತು ರಿಯಲ್ ಗಳನ್ನು ಬೇರ್ಪಡಿಸುವುದೇ ಕ್ಲಿಷ್ಟಕರ( ಬೇರ್ಪಡಿಸೋ ತಲೆನೋವು ಯಾಕೆ, ಕಥೆ ಚೆನ್ನಾಗಿದ್ದರೆ ಅಷ್ಟೇ ಸಾಕಲ್ವಾ?)

ಇನ್ನು ಪುಸ್ತಕದ ಬಗ್ಗೆ:

ನಮ್ಮ ದೇಶದ ಔಷಧೀಯ ಸಸ್ಯಗಳ ಬಗ್ಗೆ, ಅದನ್ನು ಕೊಳ್ಳೇ ಹೊಡೀತಿರೋ ವಿದೇಶೀ ಕಂಪನಿಗಳ ಬಗೆಗಿನ ನಗ್ನ ಸತ್ಯಗಳು( ಉದಾ: ಅರಿಶಿನವನ್ನು ಅಮೇರಿಕಾದವರು ಪೇಟೆಂಟ್ ಮಾಡಿಸಿಕೊಂಡಿದ್ದು - ಯೂನಿವೆರ್ಸಿಟಿ ಆಫ್ ಮಿಸಿಸ್ಸಿಪ್ಪಿ ಮೆಡಿಕಲ್ ಸೆಂಟರ್, ಡಿಸೆಂಬರ್ 1993 - ನಂತರ ಭಾರತ ಅದಕ್ಕೆ ಸವಾಲೊಡ್ಡಿ ನ್ಯಾಯಾಂಗದಲ್ಲಿ ತೀರ್ಪು ಭಾರತದ ಪರವಾಯಿತು), ಅಂಡಮಾನ್ ಗೆ ಆ ಹೆಸರು ಬರಲು ಕಾರಣ( ಹನುಮಾನ್ ಹಂಡುಮಾನ್ ಆಗಿ ನಂತರ ಅಂಡಮಾನ್ ಎಂದು ನಾಮಾಂತರಗೊಂಡಿತೆಂದು ಹೇಳಲಾಗಿದೆ).

ಪುಸ್ತಕದಲ್ಲಿ ಅಶ್ವಿನಿಗಳಿಂದ ಹಿಡಿದು( ಪುರಾತನ ಕಾಲದಿಂದ ಬಂದಿರುವ ರಹಸ್ಯ ಆಯುರ್ವೇದ ವೈದ್ಯರು), ಜರವ (ಅಂಡಮಾನ್ ನಲ್ಲಿನ ನಶಿಸಿ ಹೋಗುತ್ತಿರುವ ನಾಗರೀಕತೆಯಿಂದ ಬಹು ದೂರ ಉಳಿದಿರುವ ಒಂದು ಜನಾಂಗ) ಗಳ ಔಷಧೀಯ ಸಸ್ಯಗಳ ಬಗೆಗಿನ ಜ್ಞಾನ, ಸಂಸ್ಕೃತ ಗ್ರಂಥಗಳು(ಉದಾ: ಖಗೇಂದ್ರ ಮಣಿ ದರ್ಪಣ), ಬಹಳ ಹಿಂದೆ ಬಳಸುತ್ತಿದ್ದ ಚಿತ್ರ ಲಿಪಿ( ನೀವು ಹರಪ್ಪ ಮೊಹೆಂಜೋದಾರೋ ನಾಗರೀಕತೆಯಷ್ಟು ಹಿಂದೆ ಹೋಗ್ಬೇಕು) ಇದೆಲ್ಲಾ ಮುಗಿದು ಕಡೆಗೆ ಕಥೆ ಸಂಜೀವಿನಿ( ಸತ್ತವರನ್ನು/ಕೋಮಾಗೆ ಹೋದವರನ್ನು ಬದುಕಿಸುವ ಅಥವಾ ಮೊದಲಿನ ಸ್ಥಿತಿಗೆ ತರುವ ಔಷಧೀಯ ಸಸ್ಯ) ಗೆ ಬಂದು ನಿಲ್ಲುತ್ತದೆ.
                                      ಈ ಕೆಳಗಿನ ಚಿತ್ರವನ್ನು ನೋಡಿದರೆ ನಿಮಗೇನನ್ನಿಸುತ್ತೆ
(ಇಂಜಿನಿಯರಿಂಗ್ ನಲ್ಲಿ Scale ಹಿಡ್ಕೊಂಡು Machine Drawing ಮಾಡ್ದೋಳು, ಈಗ ಪುಸ್ತಕದಲ್ಲಿರೋ ಚಿತ್ರಾನ ಹಾಗೆ ಭಟ್ಟಿ ಇಳಿಸೋ ಪ್ರಯತ್ನ ಮಾಡಿದೀನಿ ದಯವಿಟ್ಟು ಬಯ್ಯಬೇಡಿ - ನಂಗೆ ಶಾಲೇಲಿ ಓದ್ಬೇಕಾದ್ರೆ ಮನೆ ಚಿತ್ರ ಬಿಟ್ಟು ಇನ್ನೊಂದು ಚಿತ್ರಾನೂ ಬರ್ಯೋಕೆ ಬರ್ತಿರ್ಲಿಲ್ಲ). 

 ಸೂರ್ಯ ವಂಶದ ರಾಜನ ಯೋಧ/ಸೇವಕ( ಹನುಮಂತ) ಸಾಗರ ದಾಟಿ ದ್ವೀಪ ಸೇರಿದ

ಅದ್ಹೇಗೆ ಅಂತ ಕೇಳ್ತೀರಾ... ಅದಕ್ಕೆ ನೀವು ಪುಸ್ತಕಾನ ಕೊಂಡು ಓದ್ಬೇಕು(ಮೊದ್ಲೇ ನಮ್ ಕನ್ನಡ ಪುಸ್ತಕಕ್ಕೆ Market ಇಲ್ಲ, ಪುಸ್ತಕಾನ ಈಗ ಕೊಂಡು ಓದೋರೆ ಕಮ್ಮಿ).

ಒಟ್ಟಾರೆ ಹೇಳೋದಾದ್ರೆ ಕೊಡೋ ಕಾಸಿಗೆ ಮೋಸ ಮಾಡದ ಪುಸ್ತಕ.

ಮಾಹಿತಿ:
ಪುಸ್ತಕದ ಹೆಸರು : ಕಪಿಲಿಪಿಸಾರ(Kapilipisara)
ಬೆಲೆ: 130ರೂ. ಗಳು
ಪ್ರಕಟಣೆ
& ದೊರೆಯುವ ಸ್ಥಳ: ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು.

ಶುಕ್ರವಾರ, ಸೆಪ್ಟೆಂಬರ್ 21, 2012

ರಾತ್ರಿ ಚಾರಣ - ಕೌರವ ಕೊಂಡ( Night Trek - Kowrava Konda ) – 15.9.2012

 

ನಾವೆಲ್ಲರೂ ಕೂಡಿ ಒಟ್ಟು 23  ಮಂದಿ Bangalore Ascenders( BASC - www.bangaloreascenders.org) ಇಂದ ರಾತ್ರಿ ಚಾರಣ ಕೌರವ ಕೊಂಡಕ್ಕೆ ಹೊರಟೆವು. ನಮ್ಮ ಚಾರಣದ ರೂವಾರಿ ವಿನಯ್ ಸಿ.ಬಿ.ಐ  ನಿಲ್ದಾಣದ ಹತ್ತಿರ ಎಲ್ಲರು ಸಂಜೆ 5:30ಕ್ಕೆ ಬರಬೇಕೆಂದು ಇ-ಮೇಲ್ ಕಳುಹಿಸಿದ್ದ. ಅಂತೆಯೇ ನಾನು ಮತ್ತು ರಾಮ್ ನಮ್ಮ ಟೆಂಟ್ ಮತ್ತು Sleeping Bag ಎಲ್ಲಾ ಎತ್ತಾಕ್ಕೊಂಡು 5:45ರ ಹೊತ್ತಿಗೆ  ಸಿ.ಬಿ.ಐ  ನಿಲ್ದಾಣವನ್ನು ತಲುಪುದ್ವಿ. ನಮ್ಮ ಮಹಾನಗರಿ ಬೆಂಗಳೂರಿನ ಟ್ರಾಫಿಕ್ ನ ದೆಸೆಯಿಂದಾಗಿ ಎಲ್ಲರೂ ಕಲೆತು ಬೆಂಗಳೂರನ್ನು ಬಿಡುವ ಹೊತ್ತಿಗೆ ರಾತ್ರಿ 7:45.

ವಿನಯ್ ಗೆ  ಆದಷ್ಟು ಬೇಗ ತಲುಪಿ ಬೆಟ್ಟದ ಮೇಲೆ ಬೋಂಡ, ಪುಳಿಯೋಗರೆ ಎಲ್ಲ  ಮಾಡ್ಬೇಕು ಅಂತೆಲ್ಲಾ ಆಸೆ ಇತ್ತು. ಯಾವಾಗ 25ಕ್ಕೂ ಹೆಚ್ಚಿನ ಮಂದಿ ಬರ್ತಾರೆ ಅಂತಾಯ್ತೋ ಸಮಾರಾಧನೆಗೆ ಅಡಿಗೆ ಮಾಡ್ದಂಗೆ ಆಗತ್ತೆ ಅಂತ ಸುಮ್ನಾಗ್ಬಿಟ್ಟ.

ದಾರಿಯ ಮಧ್ಯದಲ್ಲಿ ನಮ್ಮ ತಿನಿಸನ್ನು ಕಟ್ಟಿಸಿಕೊಂಡು ನಮ್ಮ ಡಾಕುಟ್ರಪ್ಪ ಹರೀಶ್ ಅವರ ನೆಂಟರ ಮನೆ( ಮಂಚಿನಬೆಲೆ) ತಲುಪಿ ನಮ್ಮ ವಾಹನಗಳನ್ನು ನಿಲ್ಲಿಸುವ ಹೊತ್ತಿಗೆ ರಾತ್ರಿ 9:50.(ನಮ್ ಡಾಕುಟ್ರುಗೆ ಚಿಕ್ಕಬಳ್ಳಾಪುರದ ಎಲ್ಲಾ ಹಳ್ಳಿಯಲ್ಲೂ ನೆಂಟರಿದ್ದಾರೆ ಮತ್ತು ಅವರೆಲ್ಲಾ ಸಹೃದಯಿಗಳು ಎಂದರೆ ಅತಿಶಯೋಕ್ತಿಯಾಗಲಾರದು). ನಂತರ BASC ನ ನಿಯಮದಂತೆ INDEMNITY BONDಗೆ ಎಲ್ಲರಿಂದ ಸಹಿ ಹಾಕಿಸಿಕೊಂಡು(ಕನ್ನಡದಲ್ಲಿ ಏನಂತಾರೆ ಅಂತ ಯಡ್ಯುರಪ್ಪ- ಶೋಭಕ್ಕನ ಮೇಲಾಣೆ ನಂಗೊತ್ತಿಲ್ಲ), ಅಲ್ಲಿದ್ದ ಸೌದೆಯನ್ನು CAMP FIREಗೆ ಉರುವಲಾಗಿ ಉಪಯೋಗಿಸಲು ಎಲ್ಲರೂ ತಲಾಗೊಂದರಂತೆ ತೆಗೆದುಕೊಂಡು ಹೊರಟೆವು. ಅಲ್ಲಿ ನಮಗೆದುರಾದ ಕೆಲವು ಹಳ್ಳಿಗರು( ತೀರ್ಥಸೇವಿಗರು) ನಮಗೆ VTU ಪ್ರಶ್ನೆ ಪತ್ರಿಕೆಗಿಂತಲೂ ಕಷ್ಟಕರವಾದ ನಾನಾ ತರಹದ ಪ್ರಶ್ನೆಗಳನ್ನು ಒಡ್ಡಿ, ನಮ್ಮನ್ನು ಶಂಕಿತ ಉಗ್ರಗಾಮಿಗಳ ಪಟ್ಟಿಗೆ ಸೇರಿಸಿಬಿಟ್ಟರು!!!!! :-(

ಆಗ ರಣಧೀರನಂತೆ ಬಂದ ಹರೀಶ್, ಅವರ ಗೌಡ್ರು ಸ್ಟೈಲ್ ನಲ್ಲಿ ಒಂದ್ ಆವಾಜ್ ಬಿಟ್ರು... ಆ ಹಳ್ಳಿಯವರು ಉಸಿರೆತ್ತದೆ ಅಲ್ಲಿಂದ ಕಾಲ್ತೆಗೆದರು.

ಹಿಂದಿನ ಕಾಲದಲ್ಲಿ ರಾಜಕುಮಾರಿನ ಭೇಟಿ ಆಗೋಕೆ 7 ಸಮುದ್ರ, 7 ಬೆಟ್ಟ ದಾಟಿ ಹೋಗ್ತಿದ್ರಂತೆ. ನಾವೂ ಹೋದ್ವಿ... ಗದ್ದೆ, ಕೆರೆ, ಬಯಲು, ಹೈ ವೇ ರೋಡು, ಕೌರವ ಹಳ್ಳಿ ಎಲ್ಲಾ ದಾಟ್ಕೊಂಡು( ರಾಜಕುಮಾರ ಸಿಗೋದಿರ್ಲಿ, ನಂಗೆ ಕಾಣಲೂ ಇಲ್ಲ) ಅಮಾವಾಸ್ಯೆ ಮಧ್ಯರಾತ್ರಿ ದೆವ್ವ ಕೂಗೋ ಹೊತ್ನಾಗೆ (ಹಿನ್ನಲೆ ಸಂಗೀತ - ತಂಗಾಳಿಯಲ್ಲಿ ನಾನು ತೇಲಿ ಬಂದೆ). ಹುಣಸೆ ಮರದ ಹತ್ರ ಇಣುಕಿ ಇಣುಕಿ ನೋಡುದ್ವಪ್ಪ ದೊಡ್ದವಿರ್ಲಿ ಒಂದು ಮರಿ ದೆವ್ವನಾದ್ರು ಕಾಣದ್ ಬೇಡ್ವ. ಬಲೇ ನಿರಾಸೆ ಆಯ್ತು ಅನ್ನಿ( ಎಷ್ಟು ದಿನ ಅಂತ ಕನ್ನಡೀಲಿ ಮುಖ ನೋಡ್ಕೊಳ್ಳೋದು!!!)

ನಾವು ದೊಣ್ಣೆಗಳನ್ನು ಹಿಡಿದು ದಂಡುಪಾಳ್ಯದವರ ತರ ದಂಡಿ ಮಾರ್ಚ್ ಮಾಡ್ಕೊಂಡ್ ಎದುರಾದ ಚಿಕ್ಕ 3 ಹಳ್ಳಿಗಳನ್ನ ದಾಟಿ ಹೋಗ್ತಿದ್ವಿ. ಒಂದೊಂದು ಹಳ್ಳೀಲೂ ನಾಯಿಗಳು ನಮಗೆ ಭವ್ಯ ಸ್ವಾಗತವನ್ನು ಕೋರ್ತಿದ್ವು. ಆ ಸದ್ದಿಗೆ ಎಚ್ಚರಗೊಂಡ ಹಳ್ಳಿಗರನ್ನು ನಮ್ ಡಾಕ್ಟ್ರು INJECTION ಕೊಡ್ದಲೇನೆ ಸಾಂತ್ವಾನ ಮಾಡ್ತಿದ್ರು.

ಬೆಟ್ಟ ಹತ್ತುತ್ತಿರಬೇಕಾದ್ರೆ ಹಿಂದೆ ಬರುತ್ತಿದ್ದ ಕಟ್ಟ ಕಡೆಯ ಯೋಧರಿಂದ ಸಣ್ಣದಾಗಿ ಜಾನಪದ ಗೀತೆ ಕೇಳಿಬರುತ್ತಿತ್ತು(ರಾಮ್ ಹಾಡ್ತಿದ್ದಿದ್ದು). ನಾನು ಸರಿಯಾಗಿ ಕೇಳೋಣ ಅಂತ ನನ್ನ ನಡಿಗೆಯನ್ನ ನಿಧಾನ ಮಾಡಿ, ಬೇಗ ಬೇಗ ಹತ್ತೇ ಅಂತ ವಿನಯ್ ಹತ್ರ ಬೈಸ್ಕೊಂಡೆ. ಸರಿ ಮೇಲೆ ಹತ್ತಿ ನಮ್ಮ ಅಂತಿಮ ಗುರಿ( Final Destiny) ತಲುಪಿದಾಗ ಸಮಯ ಮುಂಜಾನೆ 3 ಗಂಟೆ(16.9.2012).
ಅಲ್ಲಿ ಕ್ಯಾಂಪ್ ಫೈರ್ ಹಾಕಿ ನಂತರ BASCನ ನಿಯಮದಂತೆ ಎಲ್ಲರ ಸ್ವ-ಪರಿಚಯ. ಎಲ್ಲರಿಗೂ ಒಂದೊಂದು TASK(Ragging) ಇರುತ್ತಿತ್ತು ಮತ್ತು ಅದನ್ನು ಎಲ್ಲರೂ ಕಡ್ಡಾಯವಾಗಿ ಮಾಡಲೇಬೇಕೆಂದು ತಾಕೀತು ಮಾಡುತ್ತಿದ್ದೆವು.




ಅತುತ್ತಮ ಪ್ರದರ್ಶನ ನೀಡಿದವರ ಪಟ್ಟಿ ಇಂತಿದೆ:

ಡಾ. ಹರೀಶ್ ಬಾಬು- ನಮ್ಮ BASC ನ ಕಂಬ(Pillar) ಮುದ್ದಾಸರ್ ನಂತೆ ನಟಿಸಿದ್ದಕ್ಕಾಗಿ.
ಹಲ್ ಡಾಕ್ಟ್ರು ಪ್ರಿಯ - ಬೆಲ್ಲಿ ನೃತ್ಯ ಪ್ರದರ್ಶಿಸಿ ನಮ್ಮನ್ನು ರಂಜಿಸಿದ್ದಕ್ಕಾಗಿ.
ಕಲಿಯುಗ ಕರ್ಣ ರವೀಂದ್ರ(ಅಂಬರೀಶ್ ಅಭಿಮಾನಿಗಳು ನೊಂದ್ಕೋಬಾರ್ದು) - ಚಿಲ್ಲರೆ ಕಾಸು ಸಂಗ್ರಹಣೆ ಮತ್ತು ಅದನ್ನು BASC ನಿಧಿಗೆ ದಾನವಿತ್ತಿದ್ದಕ್ಕಾಗಿ.
ಉದಾರಿ ಮೋಹನ್ - ಹುಡುಗಿಯರಿಂದ ಹೇರ್ ಬ್ಯಾಂಡ್/ಕ್ಲಿಪ್ ಸಂಗ್ರಹಿಸಿ ನಂತರ ಹಿಂತಿರುಗಿಸಿದ್ದಕ್ಕಾಗಿ!!
ಯೋಗ ಪಟು ರಾಮ್ ಮತ್ತು ಶ್ವೇತ - ತಮ್ಮ ಸಂಗೀತ ಸುಧೆಯಿಂದ ನಮ್ಮ ಹೃನ್ಮನ ತಣಿಸಿದ್ದಕ್ಕಾಗಿ.
(ನಾಳೆ ನನ್ನ ಹುಟ್ಟಿದ ಹಬ್ಬ ಅಂತ ಹೇಳಿ ಬರ್ತಡೇ ಬಮ್ಸ್ ತಿಂದ ಜಿನು - ಇರಲಾರದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇನೇ)
ಆಮೇಲೆ ಸಾಹಸ ಮಾಡಿ ಟೆಂಟ್ ಹಾಕಿ ಮಲಗಿ ಹಾಡುತ್ತಾ ಇದ್ವಿ, ಎಲ್ರು ಟೆಂಟ್ ಹಾರ್ತಿದೆ ಅಂತ ಕೂಗಾಡೋಕೆ ಶುರು ಮಾಡಿದ್ರು, ರಭಸವಾಗಿ ಬೀಸುತ್ತಿದ್ದ ಗಾಳಿಯೊಟ್ಟಿಗೆ ನಮ್ಮ ಟೆಂಟ್ ಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವೃಥಾ ಪ್ರಯತ್ನ ನಡೆಸುತ್ತಿದ್ದವು(ಇದ್ರಲ್ಲಿ ಅತಿ ಶೀಘ್ರದಲ್ಲಿ ಸೋಲೊಪ್ಪಿಕೊಂಡದ್ದು ನಮ್ ಡಾಕ್ಟ್ರು ಟೆಂಟ್). ನಮ್ ಟೆಂಟ್ ನಲ್ಲಿ ನನ್ನೊಟ್ಟಿಗೆ ಇನ್ನೂ ಇಬ್ರಿದ್ದ್ರು. ಇಲ್ಲದಿದ್ದ್ರೆ ಗಾಳಿ ನನ್ನ ಸಮೇತ ಟೆಂಟ್ ನ ಹಾರುವ ತಟ್ಟೆ(Flying Saucer) ಯಂತೆ ಎತ್ಕೊಂಡ್ ಹೋಗ್ತಿತ್ತೋ ಏನೋ!!!

ಟೆಂಟ್ ತೆಗೆದು ಬಿಸ್ಕೆಟ್ಟು ಅದು ಇದು ಹಾಳು ಮೂಳು ಅಂತ ತಿಂದು ಕೆಳಗಿಳಿದು ಬರೋಷ್ಟರಲ್ಲಿ ಟಾಟಾ ಮ್ಯಾಜಿಕ್ ಎಂಬ ದೈತ್ಯ ವಾಹನ, ನಾವು ನಮ್ಮ ವಾಹನಗಳನ್ನು ನಿಲ್ಲಿಸಿದ್ದ ಜಾಗದವರೆಗೂ ನಮ್ಮನ್ನು ಹೊತ್ತೊಯ್ಯಲು ಸಿದ್ಧವಾಗಿತ್ತು. ಯಾರೋ ಚೌಕಾಸಿ ಮಾಡಿ 270ರೂ. ಗಳಿಗೆ ಕುದುರಿಸಿದ್ರು. ಡಾಕ್ರು ನೆಂಟ್ರು ಮನೆ ತಲುಪಿ ಅಲ್ಲಿ ಸಿಕ್ಕ ಪುದೀನ, ಬೀಟ್ ರೂಟ್(ಒಪ್ಪಿಗೆ ಪಡೆದು) ಕಿತ್ತುಕೊಂಡು ಹೊರಟಾಗ ಸುಮಾರು 10 ಗಂಟೆ. ಮಹಾನಗರಿ ತಲುಪುವಷ್ಟರಲ್ಲಿ ಬೆಳಗ್ಗೆ 11 ಗಂಟೆ.

ನಮ್ ಕಡೆಯಿಂದ ವಿಶೇಷ ಧನ್ಯವಾದಗಳು:

ಡಾ. ಹರೀಶ್ ಬಾಬು - ಈ ಬಾರಿಯೂ ಉದಾರತೆಯಿಂದ ತಮ್ಮ ಕಾರನ್ನು ತಂದು ಎಲ್ರನ್ನು ಲಗ್ಗೇಜ್ ಆಟೋ ಥರ ತುಂಬ್ಕೊಂಡು ಬಂದು, ಅವರ ನೆಂಟರ ಮನೇಲಿ ಗಾಡಿಗಳನ್ನ ನಿಲ್ಸೋಕೆ ಜಾಗ ಕೊಡ್ಸಿದ್ದಕ್ಕೆ.
ವಿನಯ್ ಕುಮಾರ್ -  ಚಾರಣದ ಹೊಣೆ ಹೊತ್ತದ್ದಕ್ಕಾಗಿ.

ಮಾಹಿತಿ :
ಸ್ಥಳ: ಕೌರವ ಕೊಂಡ(Kowrava Konda) , ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ
ಹತ್ತಿರದ ಸ್ಥಳ: ನಂದಿ ಬೆಟ್ಟ
ದೂರ: ಬೆಂಗಳೂರಿನಿಂದ 70+ ಕಿ.ಮೀ.
ತಲುಪುವ ಬಗೆ: ಸ್ವಂತ ವಾಹನ/ಬಸ್ಸು
ಮಾರ್ಗ: ಬೆಂಗಳೂರು - ದೇವನಹಳ್ಳಿ - ಚಿಕ್ಕಬಳ್ಳಾಪುರ - ಮರಸನಹಳ್ಳಿ- ಕೌರವ ಹಳ್ಳಿ

ಭಾನುವಾರ, ಸೆಪ್ಟೆಂಬರ್ 16, 2012

ದೂಧ್ ಸಾಗರ್ ಚಾರಣ - Dudh Sagar Trek - 01 & 02 ಸೆಪ್ಟೆಂಬರ್ 2012

   ದೂಧ್ ಸಾಗರ್ :

ಹೆಸರೇ ಹೇಳುವಂತೆ ಪಯೋನಿಧಿ ... ಧುಮ್ಮಿಕ್ಕಿ ಹರಿಯುವ ಮಾಂಡೋವಿ ನದಿಯು ಹಾಲಿನ ಧಾರೆಯಾಗಿ ಭೋರ್ಗರೆಯುತ್ತಾ ಹರಿಯುತ್ತಾಳೆ. ಕರ್ನಾಟಕ ಮತ್ತು ಗೋವಾ ರಾಜ್ಯದ ನಡುವೆ ಇರುವ ಈ ಜಲಪಾತವು ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು/ಚಾರಣಿಗರನ್ನು ಆಕರ್ಷಿಸುತ್ತದೆ.
                                    

Bangalore Ascenders (BASC - www.bangaloreascenders.org)ಇಂದ ಮೊಹಮ್ಮದ್ ರಫಿ ಆಯೋಜಿಸಿದ್ದ  ದೂಧ್ ಸಾಗರ್ ಚಾರಣಕ್ಕೆಂದು ಶುಕ್ರವಾರ(01.09.2012) ರಾತ್ರಿ ಸುಮಾರು 9ರ ಹೊತ್ತಿಗೆ ಎಲ್ಲಾ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಸೇರಿದೆವು. ಅದಕ್ಕೆ ಮುಂಚಿನ ನಮ್ಮ ಸಿದ್ಧತೆಗಳನ್ನ ನೋಡ್ಬೇಕಿತ್ತು (ಹೋದವರ್ಷ ಆಗಸ್ಟ್ ನಲ್ಲಿ ವಿವೇಕ್ PC ನೇತೃತ್ವದಲ್ಲಿ ಹೋದ ಅನುಭವ ಇತ್ತಲ್ಲ) ದಿಢೀರ್ ಉಪ್ಪಿಟ್ಟನ್ನು ತಯಾರಿಸಿ( MTR ಗೆ ಸಡ್ಡು ಹೊಡೆಯುವಂತೆ) ಅಗತ್ಯ ಸಾಮಗ್ರಿಗಳು, ತಿನ್ನೊ ವಸ್ತುಗಳನ್ನು ಸಿದ್ಧಪಡಿಸಿಕೊಂಡು ಹೊರಟ್ವಿ. ರೈಲು ಸುಮಾರು 9:40ರ ಹೊತ್ತಿಗೆ ಯಶವಂತಪುರದಿಂದ ಹೊರಟಿತು. ಎಲ್ಲರೂ ಮಾತನಾಡುತ್ತಾ ಹರಟೆ ಹೊಡೆಯುತ್ತಾ ಕುಳಿತಿದ್ದೆವು. ಅಷ್ಟರಲ್ಲಿ ತುಮಕೂರು ಬಂದು ವಿವೇಕ್ ಭಟ್ ನಮ್ಮನ್ನು ಸೇರಿಕೊಂಡ. ಅವನು ತಂದಿದ್ದ ಚಿತ್ರಾನ್ನ ತಿಂದು ಮಲಗುವಷ್ಟರಲ್ಲಿ 11:30 (ಚಂದ್ರಕಲ & ಸಂತೋಷ್(ಗದ್ದೆ) ರಾತ್ರಿ 1:43ರ ತನಕ ಮೀಟ್ರು ಹಾಕ್ತಿದ್ದ್ರು ನಂಗೆ ನಿದ್ದೆ ಬರ್ಲಿಲ್ಲ ಅಂತ ಪಾಪ ಭಟ್ಟ ಗೋಳಾಡ್ತಿದ್ದ).

ಕ್ಯಾಸಲ್ ರಾಕ್ ತಲುಪುವ ವೇಳೆಗೆ ಬೆಳಗ್ಗೆ 9:45. ಅಲ್ಲಿಂದ ಎಲ್ಲಾ ಮಳೆಯ ರಕ್ಷಾ ಕವಚ(Poncho) ಹಾಕ್ಕೊಂಡು ನಮ್ಮ ಚಾರಣವನ್ನ ಶುರುಮಾಡುದ್ವಿ. ರೈಲು ಹಳಿಗಳ ಮಧ್ಯೆ ನಡೆದು ಹೋಗೋದೇ ಒಂದು ಕಸರತ್ತು. ಕಸರತ್ತು ಏನ್ ಬಂತು ಅದ್ರಲ್ಲಿ ಅಂತಿರಾ... ಮೈಯೆಲ್ಲಾ ಕಣ್ಣಾಗಿರಬೇಕು ಅನ್ನೋ ತರ ಇಲ್ಲಿ ಕಣ್ಣೆಲ್ಲಾ ಹಳಿ ಮೇಲಿರಬೇಕು. ಆಮೇಲೆ ಒಂದು ವಾರದ ತನಕ ನಿಮಗೆ ಹಳದಿ ಬಣ್ಣದ ಮೇಲೆ ಎಷ್ಟು ಜಿಗುಪ್ಸೆ ಹುಟ್ಟತ್ತೆ ಅನ್ನೋದು ನೀವು ಚಾರಣ ಮಾಡೇ ತಿಳೀಬೇಕು. ಇದೇನಪ್ಪಾ ಮೊದಲ್ ಮೊದಲಿಗೆ ಈ ತರ ಹೇಳ್ತ್ಯಾಳೆ ಅಂದ್ಕೋಬೇಡಿ  ನಾನು ಇರೋದನ್ನ ಹೇಳ್ತಿದೀನಷ್ಟೇ.

ದಾರೀಲಿ ಸಾಗುತ್ತ ಇರಬೇಕಾದ್ರೆ ಪ್ರಕೃತಿಯ ಸೊಬಗು ಎಷ್ಟು ಮನಸ್ಸನ್ನ ಉಲ್ಲಾಸಗೊಳಿಸತ್ತೆ ಅಂತೀರಾ . . . . ದೂರದಲ್ಲೆಲ್ಲೋ ತನ್ನನ್ನೇ ಮರೆತು ಹಾಡ್ತಾ ಇರೊ ಹಕ್ಕಿಯ ನಿನಾದ ಕೇಳ್ತಾ, ತಂಗಾಳಿಗೆ ಮೈಯೊಡ್ಡಿ ಮೆಲ್ಲಗೆ ಬೀಸೋ ಮರದ ಸದ್ದನ್ನ ಆಲಿಸುತ್ತಾ, ಆ ಕ್ಷಣಕ್ಕೆ ನೆನಪಿಗೆ ಬರೋ ಭಾವಗೀತೇನ ಸಣ್ಣದಾಗಿ ಗುನುಗುತ್ತಾ . ..

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ, ಎಲ್ಲಿ ಮೋಹನ ಗಿರಿಯ ಬೆರಗಿನ ರೂಪದಿ ನಿಂದಳೋ 
                                   ( ಪಂಜೆ ಮಂಗೆಶರಾಯರಿಗೆ ಒಂದು ಸೆಲ್ಯೂಟ್)

                                       ಅದೊಂದು ಅವರ್ಣನಾತೀತ ಅನುಭವ.

                              ಸುಂದರ ಪ್ರಕೃತಿ + ಭಾವಗೀತೆ = ಕಾಂಬೋ ಪ್ಯಾಕ್ 

         ( ಊರಿನ ಜಂಜಡ, ಕೆಲಸದ ಒತ್ತಡ ಎಲ್ಲವನ್ನೂ ಮರೆತು ನಮ್ಮೊಳಗೇ ನಾವೇ ಕಳೆದುಹೋಗುವ ಸಂಭ್ರಮ)
ಹೀಗೆ ಸಾಗ್ತಾ ಸುಮಾರು 12:30ರ ಹೊತ್ತಿಗೆ ಗೋವಾ ರಾಜ್ಯಕ್ಕೆ ಸ್ವಾಗತ ಅನ್ನೋ ಫಲಕ ನೋಡುದ್ವಿ. ಕರ್ನಾಟಕದ ಗಡಿ ಮುಗಿದು ಗೋವಾ ರಾಜ್ಯಕ್ಕೆ ಪಾದಾರ್ಪಣೆ ಮಾಡಿ, ಫೋಟೋ ತೆಗೆಸಿಕೊಂಡು ಇನ್ನೊಂದು ಗಂಟೆ ಸಾಗಿದರೆ ಅಲ್ಲಿ ಒಂದು ಕರಂಜೊಲ್ ಅನ್ನೋ ಪುಟ್ಟ ನಿಲ್ದಾಣ. ಕಚೇರಿಯಲ್ಲಿ ಗಡಿಯಾರ 1:35 ಅಂತ ತೋರಿಸುತ್ತಿತ್ತು.

ಹೊಟ್ಟೆ ಕೊರ ಕೊರ ಅಂತಿತ್ತು. ಬ್ಯಾಗ್ ನಲ್ಲಿದ್ದ ಮೊಳಕೆ ಕಾಳು ತೆಗೆದು ಮಲ್ಲಿಕಾರ್ಜುನ್ ಕೈಯಲ್ಲಿಟ್ಟು ಈರುಳ್ಳಿ, ಟೊಮೇಟೊ ಹೆಚ್ಚಿ ಹಾಕೋಣ ಅನ್ನೋಷ್ಟರಲ್ಲಿ ಆಗ್ಲೇ ಎಲ್ಲ ತಿನ್ನೋಕ್ಕೆ ಶುರು ಹಚ್ಕೊಂಡ್ಬಿಟ್ಟಿದಾರೆ! ಸರಿ ಅದಕ್ಕೆ ಉಪ್ಪು ಖಾರ ಬೆರೆಸಿ ತಿನ್ನುತ್ತಾ ಇದ್ವಿ ಅಷ್ಟರಲ್ಲಿ ಸ್ಟೇಷನ್ ಮಾಸ್ಟರ್ ಇಂಜಿನ್ ಬರ್ತಾ ಇದೆ ಅಂದ್ರು. ಬೇಗ ಬೇಗ ಬ್ಯಾಗ್ ತಗ್ಲಾಕ್ಕೊಂಡು ಸಿದ್ಧವಾದ್ವಿ. ಇಂಜಿನ್ ಚಾಲಕನ ಅಪ್ಪಣೆ ಪಡೆದು ಅದನ್ನ ಹತ್ತಿ ಪಕ್ಕದಲ್ಲಿ ನಿಂತು ಧರೆಯ ನೈಸರ್ಗಿಕ ನೋಟದ ವೀಕ್ಷಣೆ - ಮರೆಯಲಾಗದ ಅನುಭವ. ಸೇತುವೆಯ ಮೇಲೆ ಇಂಜಿನ್ ಸಾಗುವಾಗ ಬಗ್ಗಿ ನೋಡಿದರೆ ಮೈ ರೋಮಾಂಚನಗೊಳ್ಳುತ್ತೆ - ರೋಮಾಂಚನ ಅಂದ್ರೆ ರೋಮ(ಕೂದಲು) ಹಂಚಿಕಡ್ಡಿ ತರ ನಿಂತ್ಕೊಳ್ಳೋದು.

ಚಾರಣ ಮಾಡೋವಾಗ ಭಾರ ಹೊತ್ಕೊಂಡು ನಿಧಾನ ಗತಿಯಲ್ಲಿ ಸಾಗುತ್ತಾ ಪರಿಸರವನ್ನು ನೋಡಿ ಪುಳಕಗೊಳ್ಳೋದು ಒಂದು ಬಗೆಯಾದ್ರೆ, ಇಂಜಿನ್ ನಲ್ಲಿ ಭಾರ ಗೀರ ಏನೂ ಇಲ್ಲದಲೆ ಆರಾಮಾಗಿ ನಿಂತು ನೋಡೋದು ಮತ್ತೊಂದು ಬಗೆ. ವ್ಯತ್ಯಾಸಕ್ಕೆ ಉತ್ತಮ ಉದಾಹರಣೆ ಅಂದ್ರೆ ಸಿನಿಮಾವನ್ನು ಚಿತ್ರಮಂದಿರಲ್ಲೂ, ಕಂಪ್ಯೂಟರ್ ನಲ್ಲೂ ನೋಡಿದಂತೆ.

ಇಂಜಿನ್ ನಲ್ಲಿ ದೂಧ್ ಸಾಗರ್ ರೈಲ್ವೆ ನಿಲ್ದಾಣ ತಲುಪುವ ಹೊತ್ತಿಗೆ ಮಧ್ಯಾಹ್ನ 2:20. ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು ಕ್ಯಾಮೆರಾಮೆನ್ ಮಲ್ಲಿಕಾರ್ಜುನ್ ಜೊತೆ ಅಂತ ಹೇಳ್ಕೊಂಡು ವಿವಿಧ ಭಂಗಿಯಲ್ಲಿ ನಿಂತು ಪಟ ತೆಗುಸ್ಕೊಂಡು ಅರ್ಧ ಕಿ. ಮೀ. ಮುಂದೆ ಸಾಗಿ ನಾವು ಬಿಡಾರ ಹೂಡೊ ಸ್ಥಳ ತಲ್ಪುದ್ವಿ. ಅಷ್ಟರಲ್ಲಿ ಸ್ವಲ್ಪ ಮಂದಿ ಬಂದು ಸೇರಿದ್ದಾಗಿತ್ತು.
ಅಲ್ಲಿ ಸ್ನೇಹಿತ ರಮೇಶ್ ಅವನ ಗೆಳೆಯರ ಬಳಗದೊಡನೆ ಬಂದು ಟೆಂಟ್ ಹಾಕಿ ಬಿಡಾರ ಹೂಡಿದ್ದ. ನಮ್ಮ ಸ್ನೇಹಿತರು ಬರೋವರೆಗೂ ಅವರ ಟೆಂಟ್ ನಲ್ಲೆ ಜಾಗ ಪಡೆದು ನಮ್ಮ ಬ್ಯಾಗ್ ಗಳನ್ನು ಅದರಲ್ಲಿಟ್ಟು, ನಮ್ ಟೆಂಟ್ ಹಾಕೋಕ್ಕೆ ಜಾಗ ಹಿಡ್ಕೊಂಡು ಕಾದ್ವಿ. ಅವರು ಬಂದಮೇಲೆ ಟೆಂಟ್ ಹಾಕಿದ್ದು, ಅದರಲ್ಲಿ ಮಲಗಿದ್ದು ಎಲ್ಲಾ ಹೊಸ ಅನುಭವ.

ಸ್ವಲ್ಪ ಹೊತ್ತಿನ ನಂತರ ರಫಿ ಎಲ್ಲರನ್ನು ಒಂದು ಸೂರಿನಡಿ ಒಟ್ಟುಗೂಡಿಸಿದ. ಅಲ್ಲಿ ನಮ್ಮ ಕೆಲ ಸ್ನೇಹಿತರು ಮಾಫಿಯಾ ಅಂತ ಹೊಸ ಆಟ ಆಡ್ತಾ ಇದ್ರು. ಅವಿ ಅದನ್ನ ತುಂಬಾನೇ ಖುಷಿಯಿಂದ ನೋಡ್ತಿದ್ದ( ಆಗ ನಂಗೆ ಅನ್ಸಿದ್ದು ಈ ಬಡ್ಡೀ ಮಗ ಇಷ್ಟು ಆಸ್ಥೆ ವಹಿಸಿ ನೋಡ್ತ್ಯಾನೆ ಅಂದ್ರೆ ಈ ಆಟದಲ್ಲಿ ಏನೋ ಕಿಕ್ ಇದೆ ಅಂತ). ನಂತರ BASC ನ ನಿಯಮದಂತೆ ಎಲ್ಲರ ಸ್ವ-ಪರಿಚಯ(ಮಾಲಿನಿ ಗಂಡನ ಬಗ್ಗೆ ಮೆಚ್ಚುಗೆಯ ಮಾತಾಡಿದ್ದು ಕೇಳಿ ತುಂಬಾನೇ ಖುಷಿ ಆಯ್ತು). ಸ್ವಲ್ಪ ಹೊತ್ತು ಅಂತ್ಯಾಕ್ಷರಿ ಆಡಿ ಪಾಕ ಕ್ರಾಂತಿ ಮಾಡೋಣ ಅಂತ ನಮ್ಮ ಟೆಂಟ್ ಗೆ ಹಿಂತಿರುಗಿದ್ವಿ.ನಮ್ಮ ಪಾಕ ಪ್ರವೀಣ ವಿವೇಕ್ ಭಟ್ ಗೆ ನಮ್ಮ ಅಳಿಲು ಸೇವೆ ಅಂತ ಸಾಥ್ ಕೊಟ್ವಿ. ನಾನು, ಅವಿ ತರಕಾರಿ ಹೆಚ್ಚಿಕೊಟ್ವಿ. ಚಂದ್ರಲ, ಸಂತೋಷ್( ಜೇಡ) ಕಾಯಿ ತುರಿದು ಕೊಟ್ರು( ಜೇಡ ಅಂತು ಚಿಪ್ಪನ್ನೂ ಬಿಡದೆ ಕ್ಲೀನ್ ಕ್ರಿಷ್ಣಪ್ಪ ಮಾಡಿಬಿಟ್ಟಿದ್ದ!!).

                                                         ಬಿಸಿ ಬಿಸಿ ತರಕಾರಿ ಉಪ್ಪಿಟ್ಟು ರೆಡಿ . . . 

ಎಲ್ಲರೂ ಮಲಗಿದ್ವಿ ಇನ್ನೇನು ಜೋಂಪು ಹತ್ತಿತ್ತು ಮಧ್ಯರಾತ್ರಿ ಒಂದ್ಸಲ ಯಾವ್ದೋ ಗೂಡ್ಸ್ ಗಾಡಿ ಶಬ್ಧ ಮಾಡ್ತು.....ತಕ್ಷಣ ಎಚ್ಚರ ಆಗ್ಹೋಯ್ತು. ಯಾರೋ ಬಾಂಬ್ ಹಾಕುದ್ರೇನೋ ಅನ್ನೊಂಥ ಸದ್ದು ( ಬೇರೆ ಬಾಂಬ್ ಅಂತ ಅಪಾರ+ಅರ್ಥ=ಅಪಾರ್ಥ ಮಾಡ್ಕೋಬೇಡಿ ಮತ್ತೆ). 2 ತಿಂಗಳ ಹಿಂದಷ್ಟೇ ಮದುವೆಯಾದ ವಿವೇಕ್ PC ಹೆಂಡ್ತಿ ಜೊತೆ ಇರೋದ್ ಬಿಟ್ಟು ನಮ್ ಟೆಂಟ್ ಗೆ ಬಂದು ಕಷ್ಟ ಸುಖ ಮಾತಾಡ್ತಿದ್ದ. ಆಮೇಲೆ ನಂಗೆ ಯಾವಾಗ್ ನಿದ್ದೆ ಬಂತೋ ಗೊತ್ತಿಲ್ಲ, ಆಗಾಗ ರೈಲು ಎದೆಮೇಲೆ ಹೋದಂಗ್ ಮಾತ್ರ ಅನ್ನಿಸೋದು.

ಬೆಳಗ್ಗೆ ಎದ್ದು ಪ್ರಕೃತಿಯ ಅಡಗಿದ ಗರ್ಭದಲ್ಲಿ ಮುಂಜಾನೆ ಕಾರ್ಯಗಳನ್ನ ಮುಗಿಸಿ ಬರ್ತಾ ಇದ್ವಿ. ಗದ್ದೆ ಅದೇನೋ ಹಾವು ತೋರುಸ್ತೀನಿ ಅಂತ ಕೂಗ್ತಿದ್ದ. ಹೋಗಿ ನೋಡಿದ್ರೆ ಆಗ ತಾನೇ ಹುಟ್ಟಿದ ಒಂದು ಮರಿ ಸರ್ಪ( ಕಾಳಿಂಗ ಸರ್ಪ ಅಂತ ಯಾರೋ ಅಂದ್ರು, ನಂಗೆ ನೆಟ್ಟುಗ್ ಗೊತ್ತಿಲ್ಲ. ತಪ್ಪು ಬರ್ಯೋದು ಆಮೇಲೆ ಯಾರಾದ್ರೂ ಬಯಾಲಜಿಸ್ಟ್ ಇದ್ರೆ ಮಕ್ ಉಗುಸ್ಕೊಳೋದು ಇವೆಲ್ಲಾ ಯಾಕೆ ಅಂತ ಸರ್ಪ ಅಂತಷ್ಟೇ ಬರ್ದಿದೀನಿ). ತೋರಿಸಿದ್ದಕ್ಕೆ ತಲಾ 10ರೂ. ಕೊಡಿ ಅಂತ ಗದ್ದೆ ಕೇಳ್ತಿದ್ದ ಆದ್ರೆ ಯಾರೂ ಬಿಡಿಗಾಸೂ ಬಿಚ್ಚಲಿಲ್ಲ.

ಬೆಳಗ್ಗೆ ಮ್ಯಾಗಿ ಮಾಡಿ, ಉಪ್ಪಿಟ್ಟು ಮಾಡುದ್ವಿ. ಎಲ್ಲರೂ ಭಟ್ಟನ್ನ ಪ್ರಶಂಸೆ ಮಾಡೋರೆ, ಅವನ್ದೇ ಫೋಟೋ ತೆಗೀತಿದ್ರು - ನಾನು ಕೇಳಿ ಅಡಿಗೆ ಮಾಡೋರ್ ತರ ಪೋಸ್ ಕೊಟ್ಟು ಪಟ ತೆಗುಸ್ಕಳ್ಳೋ ಪರಿಸ್ಥಿತಿ ಬಂದಿತ್ತು :-(

ಅಲ್ಲಿಂದ 9:40ರ ಹೊತ್ತಿಗೆ ಟೆಂಟ್ ಎತ್ಕೊಂಡು ಕೂಲೆಂ ಕಡೆ ಹೊರಟ್ವಿ.










ಸರಿಯಾಗಿ ನಿದ್ದೆ ಮಾಡದ, ಊಟವನ್ನೂ ಮಾಡದ ಯೋಗ ಪಟುಗಳಾದ ರಾಮ್ ರವರಿಂದ ನನಗೆ ದಪ್ಪ ಆಗೋಕ್ಕೆ ಉಚಿತ ಸಲಹೆಗಳು. ನಾನು ಎಷ್ಟು ಆಸಕ್ತಿಯಿಂದ ಕೇಳ್ತಿದ್ದೆ ಅಂದ್ರೆ ದಾರಿ ಸವೆದದ್ದೇ ತಿಳೀಲಿಲ್ಲ. ಮುಂದೆ ವೀಕ್ಷಣಾ ಬಿಂದು( View Point)ವಿನ ಬಳಿಯಲ್ಲಿ ಗುಂಪು ಛಾಯಾಚಿತ್ರ( Group Photo) ತೆಗೆಸಿಕೊಂಡು (ಇಲ್ಲಿ ಬೇಡ ಬೇಡ ಅಂತ ಮುಂಚೇನೇ ಹೇಳಿದ್ರೂ Ear Phone ಹಾಕ್ಕೊಂಡು ಎಲ್ಲರಿಗಿಂತ ಮುಂದೆ ಹೋದ Northy (ಉತ್ತರ ಭಾರತದವ) ತರ ಕಾಣೋ ಅಪ್ಪಟ ಕನ್ನಡಿಗ ದೀಪಕ್ ಮತ್ತು SILENT ತುಳಸಿ ಮಿಸ್ಸಾದ್ರು). 10:45ರ ಹೊತ್ತಿಗೆ ಸೊನಾಲಿಯಂ ಅನ್ನೋ ಪುಟ್ಟ ನಿಲ್ದಾಣ ತಲುಪಿ ಅಲ್ಲಿಂದ ಒಂದು ಹತ್ತು ಹೆಜ್ಜೆ ಮುಂದೆ ಸಾಗಿ ಬಲಕ್ಕೆ ತಿರುಗಿ ಜೀಪು ಹಾದಿಯಲ್ಲಿ ಸಾಗಿ ಮರಳಿ ರೈಲ್ವೆ ಹಾದಿ ಹಿಡಿದೆವು( ಯಾಕೆ ಹೀಗೆ ಮಾಡುದ್ವಿ ಅಂತ ಕೇಳ್ಬೇಡಿ ಅದೇನೋ 20 ರೂ. ಪ್ರವೇಶ ದರ ಉಳಿಸೋಕ್ಕೆ ಅಂದ್ರು, ನಂಗೆ ಎಲ್ಲೂ ಪ್ರವೇಶ ದ್ವಾರ ಕಾಣ್ಲೇ ಇಲ್ಲ).

ಅಲ್ಲಿ ನವೀನ ಒಂದು ನೇರಳೆ ಬಣ್ಣದ ಏಡಿ ನೋಡುದ್ನಂತೆ, ಅದೆಲ್ಲಿದ್ನೋ ಗದ್ದೆ, ಏಡಿ ಹಿಡಿಯೋಕ್ಕೆ ಬೆಂಕಿ ಪೊಟ್ಟಣ ಇದ್ಯಾ ಅಂತ ಕೇಳಕ್ ಶುರು ಮಾಡ್ದ. ಆಮೇಲೆ ಆ ಏಡಿ ಏಳು ಜನ್ಮದ್ದೋ ಹದಿನಾಲ್ಕು ಜನ್ಮದ್ದೋ ಪುಣ್ಯ ಮಾಡಿರ್ಬೇಕು ನೋಡೋಕ್ಕೆ ನನ್ ತರ ಇತ್ತು, ಮಾಂಸ ಇಲ್ಲ ಬದುಕ್ಕೋ ಹೋಗು ಅಂತ ಇಬ್ರೂ ಬಿಟ್ಬಿಟ್ರು. ಮುಂದೆ ಸಾಗಿ ಸುಮಾರು ಮಧ್ಯಾಹ್ನ 1:10ರ ಹೊತ್ತಿಗೆ ಅಲ್ಲೊಂದು ಸಣ್ಣ ಝರಿ ತಲುಪಿ ಎಲ್ಲರೂ ಮನಸೋ ತೃಪ್ತಿ ಆಟ ಆಡುದ್ವಿ.

ಇಲ್ಲಿ ಗಮನಿಸಬೇಕಾದ ಸಂಗತಿಗಳು:
  • ಶಾಂಪೂ ಉಪಯೋಗಿಸಿ ನೀರನ್ನ ಕಲ್ಮಶ ಮಾಡ್ಬಾರ್ದು ಅಂತ ಉಪದೇಶ ಕೊಟ್ಟ ವಿವೇಕ್ PC, ಅವನ ಹೆಂಡ್ತಿ ನನ್ ಹತ್ರ ಇಸ್ಕೊಂಡ ಶಾಂಪೂನ ಉಳಿದರ್ಧ ಭಾಗವನ್ನ ತಲೆಗ ಹಚ್ಕೊಂಡ್ ತಿಕ್ಕಿ ತಿಕ್ಕಿ ಇಡ್ತಿದ್ದ.
  • ತಲೇಲಿ ಎಂಟಾಣೆಯಷ್ಟು ಕೂದ್ಲು ಇರೋ ಸುರೇಶ ಶಾಂಪೂ ಕೊಡು ಅಂತ ಕೇಳ್ದ.
  • ಲೋಕೋದ್ಧಾರಕ, ಸಮಾಜ ಸೇವಕ ನಮ್ಮ ನಿಮ್ಮೆಲ್ಲರ ನೆಚ್ಚಿನ Blacky Chan(ಅಶ್ವಿನ್) ಎಲ್ಲರಿಗಿಂತ ತಡವಾಗಿ ಬಂದು ನಮ್ಮನ್ನು ಸೇರಿಕೊಂಡ(ಅದ್ಯಾಕೆ ಅಂದ್ರೆ .... ಕುಮಾರಸ್ವಾಮಿ-ರಾಧಿಕ ಮೇಲೆ ಆಣೆ ನಾನ್ ಹೇಳಕ್ಕಾಗಲ್ಲಪ್ಪ).
  • ಪ್ರಭು ಜೋತ ಗದ್ದೆ ಬಾಡಿ ಮಸಾಜ್ ಅಂತ ಪ್ರತಿಸ್ಪರ್ಧಿಯಾಗಿ ನಿಂತ. 25ರೂ. V/S 15ರೂ. ಇಲ್ಲೂ ಸಹ ಗದ್ದೆಗೆ 1 ರೂ. ಸಹ ಗಿಟ್ಲಿಲ್ಲ ಅನ್ನೋದು ವಿಷಾದಕರ ಸಂಗತಿ.
ಅಲ್ಲಿಂದ ಹೊರಟು ಕೂಲೆಂ ರೈಲ್ವೆ ನಿಲ್ದಾಣ ತಲುಪಿ ರೈಲ್ವೆ ಕಚೇರಿಯಲ್ಲಿ ಬಗ್ಗಿ ನೋಡಿದಾಗ ನಮಗೆ ಕಂಡದ್ದು ಸಮಯ 2:30. ನಿರೀಕ್ಷಣಾ ಕೊಠಡಿಯಲ್ಲಿ ಉಡುಪನ್ನು ಬದಲಿಸಿದೆವು. ಅವಿನಾಶ್ ಬಚ್ಚಿಟ್ಟುಕೊಂಡಂತೆ ಇಟ್ಟುಕೊಂಡಿದ್ದ ಚಪಾತಿ ಮತ್ತು ಟೊಮೇಟೊ ಗೊಜ್ಜನ್ನು ಬ್ಯಾಗಿನಿಂದ ತೆಗೆದ. ಆಗ ನಮ್ ಮುಖ ನೋಡ್ಬೇಕಿತ್ತು ಮೊರದಗಲ ಆಗ್ಹೋಗಿತ್ತು. ನೀರಲ್ಲಿ ಆಡಿ ಮೊದಲೇ ಹೊಟ್ಟೆ ಚುರುಗುಡ್ತಿತ್ತು, ಚೆನ್ನಾಗಿ ಹಾಕ್ಕೊಂಡ್ ಜಡುದ್ವಿ. ಮಾಂಸಾಹಾರಿಗಳು ಹೋಟೆಲ್ ಗೆ ಹೋಗಿ ಬಂದು ಕೊ ಕ್ಕೊ ಕ್ಕೋ ಅಂತ ಶಬ್ಧ ಮಾಡ್ತಿದ್ರು.

ರೈಲು ಕೂಲೆಂ ಬಿಡುವಷ್ಟರಲ್ಲಿ 4:40 ಆಗಿತ್ತು. ಗೋವಾಗೆ ಹೊರಟಿದ್ದ ಅಶ್ವಿನ್ ಗೆ ಟಾ ಟಾ ಮಾಡಿ ನಾವು ಲೋಂಡ ಕಡೆ ಪಯಣ ಬೆಳೆಸಿದೆವು. ಮಾನ್ಯ ಶಿವರವರ ನೇತೃತ್ವದಲ್ಲಿ ಮಾಫಿಯಾ ಆಟ ಶುರು ಮಾಡುದ್ವಿ, ಸಮಯ ಹೋದದ್ದೇ ತಿಳೀಲಿಲ್ಲ. ಲೋಂಡಾ ತಲುಪುವ ಹೊತ್ತಿಗೆ ಸಂಜೆ ಸುಮಾರು 6:45.

ವಿಶೇಷ ಸೂಚನೆ : ಇಲ್ಲಿ ಕುಂದ(ಒಂದು ಬಗೆಯ ಸಿಹಿ ಖಾದ್ಯ) ಮಾರಲು ಹೋದ ಗದ್ದೆ ಎಷ್ಟು ಲಾಭ ಗಳಿಸಿದ ಅಂತ ಮತ್ತೆ ಹೇಳುವ ಅಗತ್ಯವಿಲ್ಲವೆಂದು ತೋರುತ್ತದೆ.

ಸುಮಾರು 9ರ ಹೊತ್ತಿಗೆ ರೈಲು ಹೊರಟಿತು. ಮತ್ತೆ ಮಾಫಿಯಾ ಆಟ ಶುರು. ಈ ಭಾರಿ ಹಿಂದಿನ ದಿನ ಆಡಿ ಪಳಗಿ ನಿಷ್ಣಾತರಾಗಿದ್ದ ಶ್ರೀಯುತ ಮಲ್ಲಿಕಾರ್ಜುನ್ ರವರಿಂದ ಹೊಸ ಸೇರ್ಪಡೆಯಾದವರಿಗೆಂದು ಆಟದ ಬಗ್ಗೆ ವಿವರಣೆ ನೀಡಲಾಯಿತು. 11:30ರ ವರೆಗೂ ಆಡಿ ನಂತರ ರಫಿಯ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಮಲಗಿದೆವು( ಬೆಳಗಿನ ಜಾವ 1 ಗಂಟೆ ತನಕ ಆಡಿ 1000ರೂ. ದಂಡ ಕಟ್ಟಿದ ಬೇರೆ ತಂಡದ ಗತಿ ನಮಗೂ ಬಾರದಂತೆ ತಡೆದದ್ದಕ್ಕಾಗಿ ರಫಿಗೆ ತುಂಬು ಹೃದಯದ ಧನ್ಯವಾದಗಳು)

ಇಲ್ಲಿ ಗಮನಿಸಬೇಕಾದ ಸಂಗತಿಗಳು:
  • ಯಾವಾಗಲು ಯಾರು ಮಾಫಿಯಾ ಲೀಡರ್ ಗಳಲ್ಲಿ ಒಬ್ಬರಾಗಿರ್ತಿದ್ರು ಅಂತ ದಯವಿಟ್ಟು ಕೇಳಬೇಡಿ( ನನ್ ಮುಖ ಕೇಡಿ ಲುಕ್ ಅಂತ ನನಗೆ ಗೊತ್ತಾಗಿದ್ದೇ ಈಗ).
  • ವೃತ್ತಿಯಲ್ಲಿ ಎಂಜಿನಿಯರ್ ಗಳಾದ ಅಭಿರಾಮ್ ಹೊಳ್ಳ(ಪರ ಪುರುಷ), ವಿವೇಕ್ PC ಡಾಕ್ಟರ್ ಗಳಾಗಿ ಏನೇನ್ ಕಿಸ್ದು ದಬ್ಹಾಕುದ್ರು ಅಂತ ನಾನ್ ಹೇಳ್ಬೇಕಾಗಿಲ್ಲ.
  • ಎಲ್ರು ಮೇಲೂ ಅನುಮಾನ ಪಡೋ, ಯಾರ್ ಯಾರನ್ನ ಅನುಮಾನಿಸಿದ್ರೂ, ತಾನೂ ಅನುಮಾನಿಸೋ ಪ್ರಿಯ ಮೇಡಂ ಗೆ ತಂಡದವರಿಂದ ಜೈಕಾರ.
  • ಗದ್ದೆ ಮಾಫಿಯಾ ಆಗ್ಲಿ, ಹಳ್ಳಿಯವನಾಗಿರ್ಲಿ ಎಲ್ಲರೂ ಅವನನ್ನೇ ಮೊದಲು ಸಾಯಿಸ್ತಿದ್ರು.
ಮೇಲಿನ್ನೇನು ರಾಜಧಾನಿ ಬೆಂಗಳೂರು ಬಂತು. ಎಲ್ಲರೂ ರೈಲಿನಿಂದ ಇಳಿದೆವು. ಪ್ರಕೃತಿಯ ಮಡಿಲಲ್ಲಿ ದೂಧ್ ಸಾಗರದ ಜೋಗುಳ ಗಾನದಲ್ಲಿ ಸುಖವಾಗಿ ನಿದ್ರಿಸಿ ಕನಸ್ಕಾಣ್ತಿದ್ದ ಲೋಕದಿಂದ ಒಮ್ಮೆಲೇ ಕಾಂಕ್ರಿಟ್ ನಗರಿಗೆ ದೊಪ್ಪೆಂದು ಬಿದ್ದಂತೆ.

                                  ಮತ್ತದೇ ಆಫೀಸು, ಅದೇ ಕೆಲಸ, ಅದೇ ಟ್ರಾಫಿಕ್ ನ ಸದ್ದು . . .

ಈಗ ದೂಧ್ ಸಾಗರ್ ನೆನಪಿನ ಬುತ್ತಿಯ ಸುಂದರ ಕ್ಷಣಗಳು ಅಷ್ಟೆ. ಬೇಕೆನಿಸಿದಾಗ ಆ ಸವಿಯನ್ನುಣ್ಣಲು ನೆರವಾಗುವುದು ಅಲ್ಲಿ ತೆಗೆದ ಛಾಯಾಚಿತ್ರಗಳು ಮಾತ್ರ.

ನನ್ ಕಡೆಯಿಂದ ವಿಶೇಷ ಧನ್ಯವಾದಗಳು:

ಮೊಹಮ್ಮದ್ ರಫಿ - ಚಾರಣದ ರೂವಾರಿ
ವಿವೇಕ್ ಭಟ್ - ಪಾಕ ಕ್ರಾಂತಿ ಮಾಡಿದ್ದಕ್ಕಾಗಿ
ಮಲ್ಲಿಕಾರ್ಜುನ್, ಪ್ರಭು, ರಫಿ, ಭಟ್ಟ - ಪಟ ತೆಗ್ದಿದ್ದುಕ್ಕೆ
ಸುರೇಶ್ - ಲೈಟರ್ ಕೊಟ್ಟಿದ್ದಕ್ಕೆ ( ಯಾಕ್ ಇಟ್ಕೊಂಡಿದ್ನೋ ನಂಗ್ ಗೊತ್ತಿಲ್ಲಪ್ಪ!!)

ಮಾಹಿತಿ:

ಸ್ಥಳ: ದೂಧ್ ಸಾಗರ್( Dudh Sagar) - ಮಾಂಡೋವಿ ನದಿ, ಕರ್ನಾಟಕ & ಗೋವಾ ರಾಜ್ಯ
ಚಾರಣ ಶುರು ಮಾಡುವ ಸ್ಥಳ: ಕ್ಯಾಸೆಲ್ ರಾಕ್
ದೂರ: ಬೆಂಗಳೂರಿನಿಂದ  528 ಕಿ.ಮೀ., ಪಣಜಿಯಿಂದ 60 ಕಿ.ಮೀ.
ತಲುಪುವ ಬಗೆ: ಸ್ವಂತ ವಾಹನ/ ಬಸ್ಸು(NH -4A)/ರೈಲು( ಉತ್ತಮ)
ಮಾರ್ಗ: ಕರ್ನಾಟಕದಿಂದ( ರೈಲಿನಲ್ಲಿ)  : ಬೆಂಗಳೂರು - ಹುಬ್ಬಳ್ಳಿ - ಧಾರವಾಡ - ಅಳ್ನಾವರ - ಲೋಂಡ - ಕ್ಯಾಸಲ್ ರಾಕ್ - ದೂಧ್ ಸಾಗರ್ - ಕೂಲೆಂ


ರಾತ್ರಿ ಚಾರಣ - ಚನ್ನಗಿರಿ (Night Trek - Channagiri) – 2.6.2012

 

ಮನುಷ್ಯನ ಆಸಕ್ತಿ, ಅಭಿರುಚಿಗಳು ನೂರಾರು. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಆಸಕ್ತಿ. ಒಬ್ಬರಿಗೆ ತಿನ್ನೋದು ಅಂದ್ರೆ ಇಷ್ಟ. ಮತ್ತೊಬ್ಬರಿಗೆ ಚೆನ್ನಾಗಿ ಮಲಗೋದು ಅಂದ್ರೆ ಇಷ್ಟ, ನಮ್ಮ ಬಾಸ್ಕ್(Bangalore Ascenders-BASC- www.bangaloreascenders.org) ಮಂದಿಗೆ ಹೊಸ ಹೊಸ ಜಾಗಗಳನ್ನ ಅನ್ವೇಷಣೆ ಮಾಡಿ, ಚಾರಣ ಮಾಡೋದು ಅಂದ್ರೆ ಇಷ್ಟ.

BASC ನಲ್ಲಿ ಸುಮಾರು 3000ಕ್ಕೂ ಮೇಲ್ಪಟ್ಟು ಸದಸ್ಯರಿದ್ದಾರೆ. ಬೇರೆ ಬೇರೆ ಭಾಷೆ, ಸಂಸ್ಕೃತಿಗಳ ಬೇರೆ  ಬೇರೆ ಪ್ರದೇಶಗಳಿಂದ ಬಂದಿರೋರೆಲ್ಲರು ಒಟ್ಟಿಗೆ ಸೇರ್ತೀವಿ ಮತ್ತು ಎಲ್ಲರ ಸಮಾನ ಅಭಿರುಚಿ ಒಂದೇ ಅದು - ಚಾರಣ. 
ಒಂಥರ ವಿವಿಧತೆಯಲ್ಲಿ ಏಕತೆ ಅನ್ನಬಹುದು. ಇದು ನಿಮ್ಮ ಅನುಭವಕ್ಕೆ ಬರಬೇಕಾದರೆ ಒಮ್ಮೆನಾದ್ರು ಬಾಸ್ಕ್ ನಲ್ಲಿ ಚಾರಣ ಮಾಡೇ ತಿಳೀಬೇಕು. 

ಚಾರಣದಲ್ಲಿ ಸುಲಭ, ಸಾಧಾರಣ ಮತ್ತು ಕಷ್ಟ ಎಂಬ ವಿಭಾಗಗಳಿದ್ದು, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಚಾರಣ ಮಾಡಬಹುದು. 


ಇನ್ನೊಂದು ರೀತಿಯ ಚಾರಣದ ಬಗೆ ಅಂದ್ರೆ ಹಗಲು ಚಾರಣ ಮಾಡಿ ರಾತ್ರಿ ಬಿಡಾರ ಹೂಡೋದು ಮತ್ತು ರಾತ್ರಿಯ ಚಾರಣ. ಎರಡೂ ವಿಭಿನ್ನ ರೀತಿಯ ಅನುಭವಗಳನ್ನ ಕೊಡುತ್ತವೆ.

ಕೊರ್ದಿದ್ದು ಸಾಕು ವಿಷ್ಯಕ್ ಬಾ ಅಂತೀರ .... ಇದೋ ಬಂದೆ.

ನಾವೆಲ್ಲರೂ ಕೂಡಿ ಒಟ್ಟು 26 ಮಂದಿ ಬಾಸ್ಕ್ ಇಂದ ಚೆನ್ನಗಿರಿಗೆ ರಾತ್ರಿ ಚಾರಣ ಹೊರಟೆವು. ವಿ.ವಿ. ಪುರಂನ ತಿಸಿಸು ಬೀದಿಯಲ್ಲಿ ಎಲ್ಲರ ಸಮಾಗಮ. ನಂತರ ಹೊಟ್ಟೆಗೆ ಏನೋ ತುಂಬಿಸ್ಕೊಂಡು(ಏನೋ ಅಂತ ಹೇಳೋಕ್ಕಾಗಲ್ಲ ಯಾಕಂದ್ರೆ ಅದು ತಿನಿಸು ಬೀದಿ - ಏನೇನೆಲ್ಲಾ ಅನ್ನೋ ಪದ ಸೂಕ್ತ ಅನ್ಸುತ್ತೆ). ದಿನಾಂಕ 2.6.2012ರಂದು ರಾತ್ರಿ ಸುಮಾರು 10:30ರ ಹೊತ್ತಿಗೆ ಹೊರಟ್ವಿ. 

ನಮ್ ಡಾಕುಟ್ರಪ್ಪ ಹರೀಶ್ ಅವರ ಅಜ್ಜಿ ಮನೆಗೆ ಹೋಗಿ ಗಾಡಿಗಳನ್ನ ನಿಲ್ಸಿ ಚಾರಣ ಆರಂಭಿಸಿದ್ವಿ. ಹುಣ್ಣಿಮೆಗೆ ಇನ್ನೆರಡು ದಿನಗಳಿದ್ವು ತುಂಬು ಚಂದಿರ ನಮ್ಮನ್ನು ನಗು ನಗುತ್ತಾ ಸ್ವಾಗತಿಸಿದ. ಏನೇ ಹೇಳಿ ಬೆಳದಿಂಗಳ ಚಾರಣ ಕೊಡೋ ಮಾಜಾನೇ ಬೇರೆ. ಅದು ಅಜ್ಜಿಯ ಕೈ ತುತ್ತಿನ ತರಹ. ಆ ತಂಗಾಳಿ, ಆ ಬೆಳದಿಂಗಳು, ನಮ್ಮೊಟ್ಟಿಗಿನ ಸಧಭಿರುಚಿಯ ಸ್ನೇಹಿತರು (ಹೊಸುಬ್ರು, ಹಳುಬ್ರು, ಹಿಂದೆ ಸ್ನೇಹಿತರಾಗಿರೋರು, ಮುಂದೆ ಆಗೋರು) ಜೊತೆಗೆ ಚುಚ್ಚೋ ಮುಳ್ಳು(ಹಿನ್ನಲೆ ಸಂಗೀತ - ಏನೋ ಒಂಥರ ಪರ ಪರ) ಇವು ಸಾಲ್ದು ಅಂಥ ಸ್ವಲ್ಪ ಸ್ವಲ್ಪಾನೇ ಕಣ್ ಎಳೆಯೋ ನಿದ್ದೆ. 





ಮಧ್ಯರಾತ್ರಿ ಸುಮಾರು 2:30 ಹೊತ್ತಿಗೆ (3.6.2012) ಶುರುಮಾಡಿದ ಚಾರಣ ಒಂದು ಘಟ್ಟ ಮುಟ್ಟೋದ್ರಲ್ಲಿ ಮುಂಜಾನೆ 4:30 ಆಗಿತ್ತು. ಮುಂದಕ್ಕೆ ಸರಿಯಾದ ದಾರಿ ಕಾಣ್ಲಿಲ್ಲ ( ಸರಿಯಾದ ಏನ್ಬಂತು ನಾವ್ ಹೋಗಿದ್ದೆ ದಾರಿ ಅನ್ನಿ). ಸರಿ ಅಲ್ಲೇ ಕ್ಯಾಂಪ್ ಫೈರ್ ಹಚ್ಚಿದ್ದ್ವಿ (ಕ್ಷಮಿಸಿ ಕನ್ನಡದಲ್ಲಿ ಏನಂತಾರೆ ಅಂತ ನೆನ್ನೆ ಇಂದ ಯೋಚಿಸ್ದೆ ಹಾಳಾದ್ದು ಹೋಳೀಲೇ ಇಲ್ಲ). ಅಲ್ಲಿ ಎಲ್ಲರು ಅವರವರ ಸ್ವ-ಪರಿಚಯ ಮಾಡಿಕೊಂಡ್ರು. ಒಬ್ಬೊಬ್ಬರ ಪರಿಚಯದ ನಂತರ ಅವರಿಗೆ ಜೈಕಾರ ಅಥವ ಚಪ್ಪಾಳೆ ಹೊಡೀತಿದ್ವಿ. ಮಾನ್ಯ ರವೀಂದ್ರರವರಿಂದ ಅತ್ಯುತ್ತಮ ಪರಿಚಯ ಮಾಡಿಕೊಂಡವರಿಗೆ ಜಾಮೂನಿನ ಬಹುಮಾನ(ಸಾಯೀಶ ತಂದಿದ್ ಜಾಮೂನ್ ನ  ಎಲ್ರಿಗೂ ಕೊಟ್ಟು ಬಿಟ್ಟಿ ಪ್ರಚಾರ ತೊಗೊಂಡ). ನಂತರ ಮೂಡಣದಲ್ಲಿ ನೇಸರನ ಉದಯ(ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲಾ ತೋಯ್ದ - ಬೇಂದ್ರೆಯವರ ಕವನ ಕಣ್ರಿ ನಂದಲ್ಲ - ಕದ್ದಿದ್ದು) ಅದಾದಮೇಲೆ ಯಾರ್ಯಾರೋ ಪುಣ್ಯಾತ್ಮರು ಹೋಗಿ ಮೇಲೆ ತಲುಪೋದಕ್ಕೆ ಯುರೇಕಾ ಅಂತ ದಾರಿ ಕಂಡುಹಿಡ್ಕೊಂಡ್ ಬಂದ್ರು(ನಮ್ ಡಾಕುಟ್ರು, ಗೌಡ್ರು ಯುರೇಕಾ ಅಂತ ಬರ್ಲಿಲ್ಲ ಅದು ಬೇರೆ ವಿಷ್ಯ)

ಅಲ್ಲಿಗೆ ಹೋಗಿ ತಲುಪೋಷ್ಟ್ರಲ್ಲಿ ಬೆಳಗ್ಗೆ 8 ಗಂಟೆ. 

ಅಂತಿಮ ಗುರಿ( Final Destiny) ತಲುಪಿದಮೇಲೆ ನಿದ್ದೆ ಮಾಡೋರು ನಿದ್ದೆ ಮಾಡಿದ್ರು, ಪಟ ತೆಗ್ಯೋರು ತೆಗುದ್ರು, ಮ್ಯಾಗಿ ಮಾಡಿ ತಿನ್ನೋರು ತಿಂದ್ರು, ಕುಡ್ಯೋರು ಕುಡುದ್ರು - ಟೀನ (ಬೇರೆ ಏನೋ ಅಂದ್ಕೋಬೇಡಿ ನಮ್ ಬಾಸ್ಕ್ ನಲ್ಲಿ ಅದೆಲ್ಲಾ ನಿಷಿದ್ಧ)

ಇಳಿಯೋಕ್ಕೆ ಶುರು ಮಾಡಿದ್ದು ಸುಮಾರು 10:30ರ  ಹೊತ್ತಿಗೆ.

ಈಗ ಸಿಕ್ತು ನೋಡಿ ಸರಿಯಾದ ದಾರಿ! ಕೆಳಗಿಳಿದು ಬಂದ್ರೆ ಅಲ್ಲೊಂದು ಪುಟ್ಟ ಕಲ್ಯಾಣಿ ನಮ್ಮನ್ನು ಕೈ ಬೀಸಿ ಕರೀತಿತ್ತು. ಅದ್ರಲ್ಲಿ ಮನಸೋ ತೃಪ್ತಿ  ಈಜಾಡೋರು  ಈಜಾಡುದ್ರು, ಫೋಟೋ ತೆಗ್ಯೋರು ತೆಗುದ್ರು, ನೀರಲ್ಲಿ ಕಾಲು ಇಳಿಬಿಟ್ಕೊಂಡು ಕೂರೋರು ಕೂತಿದ್ರು.
ಅಲ್ಲಿಂದ ಹರೀಶ್ ರವರ ಅಜ್ಜಿಮನೆಯತ್ತ ನಮ್ಮ ನಡಿಗೆ. ಅಲ್ಲಿ ಭಾನುವಾರದ ಬಾಡೂಟ ಸಿದ್ಧವಾಗಿತ್ತು(ತಿನ್ನೋರು ತಿಂದ್ರು ಉಳಿದೋರು ನಮ್ಮಂಥ ಸಸ್ಯಾಹಾರಿಗಳು ಗೊಜ್ಜನ್ನ ತಿಂದ್ವಿ). ಅಲ್ಲಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ಮಧ್ಯಾಹ್ನ 3 ಗಂಟೆ.


ನಮ್ ಕಡೆಯಿಂದ ವಿಶೇಷ ಧನ್ಯವಾದಗಳು:

ಡಾ. ಹರೀಶ್ ಬಾಬು
- ಉದಾರತೆಯಿಂದ ತಮ್ಮ ಕಾರನ್ನು ತಂದು ಎಲ್ರನ್ನು ಲಗ್ಗೇಜ್ ಆಟೋ ಥರ ತುಂಬ್ಕೊಂಡು ಬಂದು, ಅವರಜ್ಜಿ ಮನೇಲಿ ಗಾಡಿಗಳನ್ನ ನಿಲ್ಸೋಕೆ ಜಾಗ ಕೊಟ್ಟು, ಬಿಟ್ಟಿ ಊಟಾನೂ ಹಾಕ್ಸಿದ್ದಕ್ಕೆ.

ವಿನಯ್ ಕುಮಾರ್ - ಇವನ್ ಬಗ್ಗೆ ಏನ್ ಹೇಳೋದ್ ರೀ - ಈ ಚಾರಣದ ರೂವಾರಿ. ಶುಕ್ರವಾರ ಸಂಜೆ ಈ-ಮೇಲ್ ನ ಪೋಸ್ಟ್ ಮಾಡಿ, ಶನಿವಾರ ರಾತ್ರಿ ಹೊತ್ತಿಗೆ 26
ನಾನ ಸಂಘಟಿಸಿ ಚಾರಣಕ್ಕೆ ಎತ್ತಾಕ್ಕೊಂಡ್ ಬಂದಿದಾನೆ( ರಾಜಕೀಯ ಪಕ್ಷದೋರ ಕೈಗೆ ಸಿಗದಂತೆ ಇವನನ್ನು ನೋಡಿಕೊಳ್ಳೋದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ!!!)

                                                           ಅಷ್ಟೇನಪ್ಪ ಸುಸ್ತಾಯ್ತು ಬೈ ಬೈ 


ಮಾಹಿತಿ :
ಸ್ಥಳ: ಚನ್ನಗಿರಿ
(Channagiri) , ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ
ಹತ್ತಿರದ ಸ್ಥಳ: ನಂದಿ ಬೆಟ್ಟ
ದೂರ: ಬೆಂಗಳೂರಿನಿಂದ 56 ಕಿ. ಮೀ.
ತಲುಪುವ ಬಗೆ: ಸ್ವಂತ ವಾಹನ/ ರೈಲು/ ಬಸ್ಸು
ಮಾರ್ಗ: ಬೆಂಗಳೂರು - ದೇವನಹಳ್ಳಿ - ನಂದಿ ಕ್ರಾಸ್ - ನಂದಿ ಬೆಟ್ಟದ ಹಿಂಬಾಗ 

ನನ್ನಲ್ಲಿ ನನ್ನನ್ನು ನಾನು ಕಂಡ್ಕೊಂಡಿರೋದು - About Myself

ನನ್ ಬಗ್ಗೆ ಏನ್ ಹೇಳೋದ್ ರೀ ...

ಗಲ ಗಲ ಅಂತ ಮಾತಾಡೋ, ಕನ್ನಡಾನ ಸ್ವಲ್ಪ ಅತಿಯಾಗೆ ಪ್ರೀತ್ಸೋ ಹುಡುಗಿ ಅಂತ ಹೇಳ್ಬೇಕಷ್ಟೇ....

ಪುಸ್ತಕ ಓದೋದು(ಶೈಕ್ಷಣಿಕ ಪುಸ್ತಕಗಳನ್ನು ಹೊರತುಪಡಿಸಿ), ಆಗಾಗ ಭಾವಗೀತೆಗಳನ್ನ ಗುನುಗೋದು ನನ್ನ ಹವ್ಯಾಸ. ಚಾರಣ ಅಂದ್ರೆ ಇಷ್ಟ.
ಬೆಂಗಳೂರಲ್ಲಿ ಕೆಲಸ ಮಾಡ್ತಿದ್ರೂ ನಾನು ತುಮಕೂರಿನ ಹುಡುಗಿ ಅಂತ ಹೇಳ್ಕೊಳೋಕೆ ಇಷ್ಟ ಪಡ್ತೀನಿ.

8 ವರ್ಷ  ಕಾದು ನಮ್ಮ ಅಪ್ಪ,ಅಮ್ಮ ನನ್ನ ಈ ಭೂಮಿಗೆ ತಂದು 26 ವರ್ಷ ಆಯ್ತು. ಇನ್ನೂ ಏನೂ ಕಿಸ್ದು ದಬ್ಬಾಕಿಲ್ಲ( ನಂಗು ನಮಕ್ಕಂಗು 8 ವರ್ಷ ವ್ಯತ್ಯಾಸ)

ಹುಟ್ಟೋವಾಗ್ಲೆ ಕಾಲಿಗೆ ಚಕ್ರ ಕಟ್ಕೊಂಡ್ ಹುಟ್ಟಿರ್ಬೇಕು, ಅದಕ್ಕೆ ತಿರುಗೋದು ನನ್ನ ಹವ್ಯಾಸ( ನಾವು ಅಲೆಮಾರಿ ಜನಾಂಗದವ್ರು ಅಂತ ಅಪಾರ+ಅರ್ಥ ಮಾಡ್ಕೋಬೇಡಿ).

ಅದಕ್ಕೆ ಮುಂದೆ ನನ್ನ ಚಾರಣದ ಅನುಭವಗಳನ್ನ(ಪ್ರವಾಸ ಕಥನ), ಪುಸ್ತಕ ಓದಿದ ನಂತರ ನನಗನ್ನಿಸಿದ್ದು,ಇಷ್ಟವಾದ/ ಕಾಡೋ ಹಾಡು ಇನ್ನೂ ಏನೇನ್ ಅನ್ಸತ್ತೋ ಅದನ್ನೆಲ್ಲಾ ನಿಮ್ಮೊಟ್ಟಿಗೆ ಹಂಚ್ಕೊಳ್ಳೋಣ ಅಂತ. ನಿಮಗೆ ಕನ್ನಡ ಓದೋ ತಾಳ್ಮೆ ಇದ್ರೆ ಓದಿ. ಓದಿದ ನಂತರ ಏನಾದ್ರೂ ಹೇಳ್ಬೇಕು/ಮಕ್ ಉಗಿಬೇಕು ಅನ್ಸುದ್ರೆ ಸಂಕೋಚ ಪಟ್ಕೋಬೇಡಿ. ಅನ್ಸಿದ್ದನ್ನ ಮಾಡ್ಬಿಡ್ಬೇಕಪ್ಪ ಆಮೇಲೆ ಏನಾಗುತ್ತೋ ಆಗ್ಲಿ (ಕರ್ಮಣ್ಯೇSವಾಧಿಕಾರಸ್ಯೆ ಮಾ ಫಲೇಷು ಕದಾಚನ). ಸ್ವಲ್ಪ ದಿನ/ವರ್ಷ ಆದ್ಮೇಲೆ ಹಿಂದೆ ತಿರುಗಿ ನೋಡಿ ಛೇ ನಾನ್ ಇದನ್ನ ಮಾಡಬೇಕಿತ್ತು ಮಿಸ್ ಮಾಡ್ಕೊಂಡೆ ಅಂದ್ಕೊಳ್ಳೋದು ಇವೆಲ್ಲ ಯಾಕಲ್ವಾ - ಇವೆಲ್ಲ  ನೀವ್ ಕಾಮೆಂಟ್ ಮಾಡೋಕ್ ಅಲ್ರಿ ಸುಮ್ನೆ ಅನ್ಸಿದ್ ಹೇಳ್ದೆ ಅಷ್ಟೆ.



                                                                                - ಪಲ್ಲವಿ ರಂಗನಾಥ್
                                                                       pallavi.ranganath@ymail.com


ಸಜೀವವಾದ ವಾಣಿಯೂ, ಮುಖ ನಯನ ಅಂಗಗಳ ಅಭಿನಯವೂ ಮಾಡುವ ಕೆಲಸವನ್ನು ಲೇಖನಿ ಮಾಡಬಲ್ಲುದೆ? .... ಆಲಿಸುವವರಲ್ಲಿ ವಿಶ್ವಾಸವಿದ್ದರೆ, ಮೃತದಲ್ಲಿಯೂ ಶ್ವಾಸವಾಡುತ್ತದೆ!!!

                                                                                         -ಕುವೆಂಪು