ಸೋಮವಾರ, ನವೆಂಬರ್ 26, 2012

ಕುಮಾರ ಪರ್ವತ ಚಾರಣ ( Kumara Parvata(KP) Trek - 7& 8 ನವೆಂಬರ್ 2012

ಕುಮಾರ ಪರ್ವತ :-
ಕುಮಾರ ಪರ್ವತ(KP)ವು ಕರ್ನಾಟಕದ ಸುಳ್ಯ ತಾಲೂಕಿನ, ಸುಬ್ರಮಣ್ಯ ಗ್ರಾಮದಲ್ಲಿ ನೆಲೆಸಿದ್ದು, ತನ್ನ ಅಪರಿಮಿತ ಪ್ರಕೃತಿ ಸೌಂದರ್ಯದಿಂದ ಚಾರಣಿಗರನ್ನು ಆಕರ್ಷಿಸುತ್ತಿದೆ. ಇಡೀ ಕರ್ನಾಟಕದಲ್ಲೇ ಚಾರಣಕ್ಕೆಂದು ಇದಕ್ಕೆ 3ನೇ ಸ್ಥಾನ( 1- ಮುಳ್ಳಯ್ಯನ ಗಿರಿ, ಚಿಕ್ಕಮಗಳೂರು, 2 - ತಡಿಯಾಂಡಮೋಲ್, ಕೊಡಗು). ಸುಬ್ರಮಣ್ಯನ ಶ್ರೀರಕ್ಷೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಕುಮಾರ ಪರ್ವತವು ಚಾರಣಿಗರ ಸ್ವರ್ಗವೆಂದೇ ಹೇಳಬೇಕು.
1712 ಮೀ. ಎತ್ತರದ ಶಿಖರ ಬಿಂದುವನ್ನು ಮುಟ್ಟಲು ನಾವು 13 ಕಿ.ಮೀ. ಚಾರಣ ಮಾಡಬೇಕು (ಒಟ್ಟಾರೆ ಕ್ರಮಿಸುವ ದೂರ 26 ಕಿ.ಮೀ.).ಸೋಮವಾರ ಪೇಟೆಯ ಕಡೆಯಿಂದಲೂ ಚಾರಣ ಮಾಡಬಹುದಾಗಿದೆ.
ಕುಮಾರ ಪರ್ವತ

ಕುಮಾರ ಪರ್ವತ -ಮಾರ್ಗ ಸೂಚಿ
ಕುಮಾರ ಪರ್ವತ -ಮಾರ್ಗ ಸೂಚಿ


ಮಂಜರಾಬಾದ್ ಕೋಟೆ :-
ಸಕಲೇಶಪುರದ ಹೊರವಲಯದಲ್ಲಿ ನಿರ್ಮಿತವಾಗಿರುವ ಈ ಕೋಟೆಯನ್ನು ಮೈಸೂರಿನ ಹುಲಿ ಟಿಪ್ಪು ಸುಲ್ತಾನನು 1785-92ರ ಅವಧಿಯಲ್ಲಿ ನಿರ್ಮಿಸಿದನು. ತನ್ನ ವಿಶಿಷ್ಟ ಇಸ್ಲಾಮಿಕ್ ಶೈಲಿಯ ಈ ಕೋಟೆಯು ನಕ್ಷತ್ರಾಕೃತಿಯಲ್ಲಿದೆ. ಕೋಟೆಯ ಮಾದರಿಯ ನೀಲನಕ್ಷೆಯನ್ನು ಕೋಟೆಯ ಒಳ ಭಾಗದಲ್ಲಿ ಕೆತ್ತಿದ್ದಾರೆ.
ಮಂಜರಾಬಾದ್ ಕೋಟೆ


ಪರದೆಯ ಹಿಂದೆ :-
2009ರ ಏಪ್ರಿಲ್ ನಲ್ಲಿ 6 ಜನ ಸ್ನೇಹಿತರೊಟ್ಟಿಗೆ KP ಗೆ ಚಾರಣ ಮಾಡಿದ್ದು, ನಂತರ ಈ ಬಾರಿ ಬೆಂಗಳೂರು ಅಸೆಂಡರ್ಸ್ (Bangalore ASCENDers - BASC) ಮುಖಾಂತರ ಹೋಗಿ ಬರೋಣವೆಂದುಕೊಂಡು BASC ನಿಂದ ಇ-ಮೇಲ್ ಕಳುಹಿಸಿದೆ.
ಈ ಬಾರಿ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಚಿಕ್ಕಪ್ಪನವರ ಸಹಾಯ ಪಡೆದು ಹಸಿರು ಹಾದಿ(Green Route) ಚಾರಣದ ಹಾದಿಯನ್ನು ಗೂಡ್ಸ್ ಗಾಡಿಯ ಹಿಂದಿನ ತೆರೆದ ಬೋಗಿಯಲ್ಲಿ ಕುಳಿತು( चल चैय्या चैय्या)  ಪ್ರಯಾಣ ಮಾಡಬೇಕೆಂದು ಆಸೆಪಟ್ಟಿದ್ದೆ.  ಇ - ಮೇಲ್ ಮಾಡಿದ 24 ಗಂಟೆಗಳೊಳಗಾಗಿ ಅತ್ಯುತ್ತಮ ಪ್ರತಿಕ್ರಿಯೆ ಬಂದು, ನಾನು ಪ್ರತಿಯೊಬ್ಬರಿಗೂ ಖುದ್ದಾಗಿ ಕರೆ ಮಾಡಿ, ಚಾರಣಕ್ಕೆ ಆಹ್ವಾನಿಸಿದೆ. ಶ್ರೀಕಾಂತ್ ರವರೊಟ್ಟಿಗೆ ಮಾತನಾಡುತ್ತಾ ನನ್ನ चल चैय्या चैय्या ಯೋಜನೆಯ ಬಗ್ಗೆ ತಿಳಿಸಿ ತಮಗೆ ಸಮ್ಮತಿಯಿದೆಯೇ ಎಂದು ಕೇಳಿದೆ. ತಮ್ಮ ಒಪ್ಪಿಗೆಯನ್ನು ಸೂಚಿಸಿದ ಅವರು, ನಿಮ್ಮ ಸಂದರ್ಶನ(Interview) ದಲ್ಲಿ ನಾನು ಪಾಸಾದೆನೇ, ನನ್ನ ಹೆಸರನ್ನು ಆಯ್ಕೆಯಾದವರ ಪಟ್ಟಿಯಲ್ಲಿ ಸೇರಿಸುವಿರಾ ಎಂದು ಕೇಳಿದರು ;-) .
ಅನಿವಾರ್ಯ ಕಾರಣಗಳಿಂದ ಆಯ್ಕೆ ಪಟ್ಟಿಯಲ್ಲಿದ್ದ ಒಬ್ಬರು ಬರಲಾಗದೆಂದು ತಿಳಿಸಿದ ಕಾರಣ ಶ್ರೀಹರ್ಷನಿಗೆ ಕರೆ ಮಾಡಿ, ದೇವಸ್ಥಾನಕ್ಕೆ ಭಾರತೀಯ ಸಾಂಪ್ರದಾಯಿಕ ಉಡುಗೆಯುಟ್ಟು ಹೋಗಬೇಕೆಂಬುದು ನನ್ನ ಇಚ್ಛೆ, ಇದಕ್ಕೆ ತಮ್ಮ ಒಪಪಿಗೆಯಿದೆಯೇ ಎಂದು ಕೇಳಿದರೆ,  ಪಂಚೆ ಏನು ಕಾಡು ಮನುಷ್ಯರ ವೇಷ ಧರಿಸಲೂ ಸಿದ್ಧ ಎಂದ. ( ಕಾಡು ಮನುಷ್ಯರು ಬಟ್ಟೇನೇ ಹಾಕೋದಿಲ್ಲ ಅಂತ ಎಲ್ಲೋ ಓದಿದ್ದ ನೆನಪು !!!)ಒಟ್ಟು 12 ಜನರನ್ನು ಆಯ್ಕೆಯ ಪಟ್ಟಿಯಲ್ಲಿ ಸೇರಿಸಿ, 1 ಆಸನವನ್ನು ವಿವೇಕ್ ಭಟ್ ( My Cousin) ಗಾಗಿ ಮೀಸಲಿಟ್ಟಿದ್ದೆ. ಅನಿವಾರ್ಯ ಕಾರಣಗಳಿಂದಾಗಿ ಅವನು ನಮ್ಮೊಡನೆ ಬರಲಾಗಲಿಲ್ಲ. ಹಾಗಾಗಿ ಕಾಯುತ್ತಿರುವವರ ಪಟ್ಟಿ(Waiting List) ಯಲ್ಲಿದ್ದ ಚಂದ್ರಶೇಖರ್ ಗೆ ಕರೆ ಮಾಡಿ ಕೇಳಿದಾಗ ಅವರು ಖುಷಿಯಿಂದ ಬರಲು ಒಪ್ಪಿದರು.

ಬಂದಿತು ನವೆಂಬರ್ 16: 

ಪೂರ್ವ ಯೋಜನೆಯಂತೆ Bangalore Ascenders( BASC - www.bangaloreascenders.org)ನಿಂದ ಕುಮಾರಪರ್ವತಕ್ಕೆ ಚಾರಣಗೈಯ್ಯಲು ಎಲ್ಲರೂ ಶುಕ್ರವಾರ (16 ನವೆಂಬರ್ 2012) ರಾತ್ರಿ 10 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿಯಿರುವ ಶಾಂತಲಾ ರೇಷ್ಮೆ ಮಳಿಗೆ(Shantala Silk House) ಯ ಬಳಿ ಸೇರಿದೆವು. 10:45 ರ ಹೊತ್ತಿಗೆ ಸಕಲೇಶಪುರಕ್ಕೆ ನಮ್ಮ ಪಯಣ ಬೆಳೆಯಿತು.
ದಾರಿಯ ಮಧ್ಯದಲ್ಲಿ ಶ್ರೀಹರ್ಷನ ಒತ್ತಾಯದ ಮೇರೆಗೆ ಚನ್ನರಾಯಪಟ್ಟಣದ ಬಳಿಯ ಒಂದು ಡಾಬಾದಲ್ಲಿ ಚಹಾ ಮತ್ತು ಇಡ್ಲಿ ಸೇವನೆಯಾಯಿತು. ಸುರೇಶ್ ಅಲ್ಲಿ ತನ್ನ 7ನೇ ತರಗತಿಯಲ್ಲಿ ಬರೆದ ಪ್ರೇಮ ಪತ್ರದ ಬಗ್ಗೆ ಹೇಳುತ್ತಾ, ಮಾತಿನ ಮಧ್ಯೆ H G ಗೀತ ಎಂದು ಹೇಳಿದ. ಅಷ್ಟರಲ್ಲಿ ಅಲ್ಲಿಗೆ ಯಾವಾಗ ಬಂದು ಸೇರಿದ್ದನೋ ಗೊತ್ತಿಲ್ಲ, ಹರ್ಷ MERCURY ಗೀತ ಅಂದ. ಎಲ್ಲರೂ ನಗುತ್ತಿದ್ದರೆ, ನನಗೆ ಅರ್ಥವಾಗದೆ ಬೆ ಬೆ ಬ್ಬೆ ಎಂದು ನೋಡುತ್ತಾ ಪಕ್ಕಕ್ಕೆ ತಿರುಗಿದೆ, ಸುಧೀಂದ್ರ , HG- Atomic Symbol of MERCURY ಎಂದ. ನನ್ನ ಬೆಪ್ಪು ತನಕ್ಕೆ ನನ್ನನ್ನು ನಾನೇ ಶಪಿಸುತ್ತಾ ಎಂದುಕೊಂಡೆ ಅದಕ್ಕೆ ಈ ಬಡ್ಡೀಮಗ INTEL ನಲ್ಲಿ ಇರೋದು ಅಂತ. (Intel Inside, Mental Outside) .ನಂತರ TT ಹತ್ತಿ ಸಕಲೇಶಪುರ ತಲುಪುವ ಹೊತ್ತಿಗೆ ಬೆಳಗಿನ ಜಾವ 3 ಗಂಟೆ.
(ಇಲ್ಲಿ ಶೇಖರ್ ನ GPS in SAMSUNG Mobileಗೆ ನಮ್ಮ ಧನ್ಯವಾದಗಳನ್ನು ಅರ್ಪಿಸಲೇಬೇಕು. ಮುಕ್ಕಾಲು ಗಂಟೆ ಯಾವ್ಯಾವುದೋ ದಾರಿ ಹೇಳಿ ಚಾಲಕನ ತಲೆ ಅಯೋಮಯ! ಮೆಟ್ಟಿಲುಗಳನ್ನು ಇಳಿದು ಹೋಗುವ ದಾರಿ ಎಲ್ಲಾ ಹೇಳಿದ್ರೆ ಪಾಪ ಡ್ರೈವರ್ Centre Shock ತಿಂದವರಂತೆ ಶಾಕ್ ಆಗ್ದಲೇ ಇರ್ತಾರಾ!!)

 ನವೆಂಬರ್ 17:
ರೈಲ್ವೆ ನಿಲ್ದಾಣದಲ್ಲಿ BASC ನ ನಿಯಮದಂತೆ ಎಲ್ಲರ ಸ್ವ-ಪರಿಚಯ ಶುರುವಾಯಿತು. ಎಲ್ಲರೂ ತಮ್ಮ ಅಡಗಿದ ಪ್ರತಿಭೆ(HIDDEN TALENT ) ಗಳನ್ನು ಹೊರತೆಗೆಯಲು ಶುರುಮಾಡಿದರು.  
  • ವಿನೂತ್ನ(ಅತ್ಯದ್ಭುತ ಮನೋಸ್ಥೈರ್ಯಿ) - ಹರ್ಷನಿಗಾಗಿ 2 ಯುಗಳಗೀತೆಗಳನ್ನು ಹಾಡಿದಳು (ಯಾಕಂದ್ರೆ ಇವನ Apartmentನಲ್ಲಿ WASHING MACHINE ಇದೆ! )
  • ಶ್ರೀ ಹರ್ಷ( ಅತ್ಯುತ್ತಮ ವಾಗ್ಮಿ ) - ನನ್ನ ಹೆಸರು ಹರ್ಷ, ಶ್ರೀ ಹರ್ಷ (BOND, JAMES BOND) ಎಂದು ಹೇಳಿಕೊಂಡ. ವಿನೂತ್ನಳಿಗಾಗಿ ಅವಳ ಮೇಲೆ ಆಶುಕವಿತ್ವ ರಚಿಸಿ ಹಾಡಿದನು. (ಭಾಷೆ ಅರ್ಥವಾಗದಿದ್ರು ನಾಚಿ ನೀರಾಗುವ ಸರದಿ ವಿನೂತ್ನಳದು)
  • ಯದುನಂದನ(ಹಾಸ್ಯ ಚಕ್ರವರ್ತಿ) - ತನ್ನ ವಿಶಿಷ್ಟ ಶೈಲಿಯಿಂದ ಮುಗ್ಧನಂತೆ ಹಾಸ್ಯಮಾಡುತ್ತಾ ಮನಸೂರೆ ಮಾಡುತ್ತಾನೆ. ಇವನ ಮನೆಯ ಪಾಯಿಖಾನೆ(TOILET) ಯ Commodeನಲ್ಲಿ ನೀಲಿಹಲ್ಲು (BLUETOOTH) ಇರುವುದು ಒಂದು ವಿಶೇಷವಾದರೆ, ಇವನು ಅದರ ಮೇಲೆ ಕುಳಿತ ಸಮಯದಲ್ಲೇ CC Camera ಇಲ್ಲದಿದ್ದ್ರೂ, ವರುಣ್ ಇವನ ಮೊಬೈಲ್ ಗೆ ಕರೆ ಮಾಡುವುದು ಮತ್ತೊಂದು ವಿಶೇಷ
  • ವರುಣ್( ಛಲಗಾರ - ಜಲಪಾತದ ಬಳಿ ಬಿದ್ದು ಮೂಗು ಮುರಿದುಕೊಂಡು ಇನ್ನು 1 ತಿಂಗಳಾಗಿಲ್ಲ ಆಗಲೇ KP ಚಾರಣಕ್ಕೆ ಅತ್ಯುತ್ಸಾಹದಲ್ಲಿ ಬಂದ) - RHYMES ಹೇಳಪ್ಪಾ ಅಂದ್ರೆ ಪಕ್ಕದಲ್ಲಿದ್ದ Intel ಹರ್ಷನಿಗೆ ನಾಯಿ ಮರಿ ನಾಯಿ ಮರಿ ತಿಂಡಿ ಬೇಕಾ ಅಂತ ಕೇಳ್ತಾನೆ( ಹರ್ಷ ಭೋಜನ ಪ್ರಿಯ ಎಂಬುದು ಎಲ್ಲರೂ ಒಪ್ಪುವಂತ ಮಾತಾಗಿದ್ರೂ ಈ ರೀತಿ ತೇಜೋವಧೆ ಆಗ್ಬಾರ್ದಿತ್ತು)
  • ವಂಶಿ ಕೃಷ್ಣ( ಸಾಧು ಪ್ರಾಣಿ) - ತೆಲುಗು ಚಿತ್ರದ ಸಂಭಾಷಣೆ ಹೇಳ್ತೀನಿ ಅಂತ ಎಲ್ಲಾ ಎಗರಿಸಿಕೊಂಡು ಹೇಳ್ಬಿಡೋದೇ ( NTR ಏನಾದ್ರೂ ಬದುಕಿ, ಅಪ್ಪಿ ತಪ್ಪಿ ಕೇಳಿಸಿಕೊಂಡಿದ್ದಿದ್ದರೆ ಅಲ್ಲೇ ಹೃದಯಾಘಾತವಾಗ್ತಿತ್ತೇನೋ!!)
  • ರಾಮ್ ಕುಮಾರ್ (ಯೋಗ ಪಟು) - ಇವನ ಜಾನಪದ ಗೀತೆಯನ್ನು ಆಲಿಸಿ ರೈಲ್ವೆ ಸಿಬ್ಬಂದಿಯೂ ತಲೆದೂಗಿದರು!
  • ನಾಗೇಂದ್ರ( G-Boys ಅಲಿಯಾಸ್ ಬುಸ್ಸು) - ಹರ್ಷನನ್ನು ಹರ್ಷಿತ ಮಾಡಿ ಪ್ರೇಮ ನಿವೇದನೆ (Propose) ಮಾಡೆಂದು ಹೇಳಿದರೆ L-BOARD ತರ ಆಡಿ, ನಂತರ ತಾನೇ ಖುದ್ದಾಗಿ ಹಾಡು ಹಾಡುತ್ತೇನೆಂದು ಹಾಡಿದ( ಕ್ಷಮಿಸಿ - ಯಾವ ಹಾಡೆಂದು ನೆನಪಿಲ್ಲ)
  • ಚಂದ್ರ ಶೇಖರ್( ಸಕಲಕಲಾವಲ್ಲಭ) - ಹಿಂದಿ ಹಾಡು ಹೇಳಿ ಮನರಂಜಿಸುವುದರ ಜೊತೆಗೇ ರೈಲ್ವೆ ಪೋಲಿಸ್ ಎದುರಲ್ಲೇ ಪೋಲೀಸರ ಮೇಲಿನ ಒಂದು ಹಾಸ್ಯ ಚಟಾಕಿ ಹಾರಿಸಿದ.
  • ಶ್ರೀಕಾಂತ್( HP ಮ್ಯಾನೇಜರ್) - ತಮ್ಮ ಉಲ್ಟಾ ಸಾಹಿತ್ಯದ ಗಾನ ಸುಧೆಯಿಂದ( ವನಮಾ ವುಹದೇ - ಮಾನವಾ ದೇಹವು) ನಮ್ಮ ಹೃನ್ಮನ ತಣಿಸುವುದರ ಜೊತೆಗೇ ತಮ್ಮ ವಯಸ್ಸನ್ನೂ ಸಹ ಉಲ್ಟಾ ಮಾಡಿಕೊಂಡು ( 43-34) ಯುವಕರಂತೆ ನಮ್ಮೊಡನೆ  ಬೆರೆತರು.                                                                                        ಇವ್ರ್ ಮನೇಲಿ Prestige Cooker ಉಪಯೋಗಿಸ್ತಾರೆ( ಜಾಹಿರಾತು - ಯಾರು ಹೆಂಡ್ತೀನ ಪ್ರೀತಿಸ್ತರೋ ಅವರು Prestigeನ ಹೇಗೆ ನಿರಾಕರಿಸಿಯಾರು!!
  • ಸುರೇಶ್ ( ಶಾಂಪೂ ಸುರೇಶ) - HG ಗೀತ ಓಹ್ ಕ್ಷಮಿಸಿ Mercury ಗೀತಾಗೆ ನೀಡಿದ ಪ್ರೇಮಪತ್ರದ ಸವಿವರಣೆ ನೀಡುತ್ತಾ PT ಮಾಸ್ತರರು ಬಿಟ್ಟ ಒದೆಯನ್ನು TV9 ಗೆ ಸಡ್ದು ಹೊಡೆಯುವಂತೆ ಚಿತ್ರ ಸಹಿತ ಕಣ್ಮುಂದೆ ಬರುವಂತೆ ವಿವರಿಸಿದನು.
  • ಸುಧೀಂದ್ರ ( ಪಡ್ಡು from ಪಾವಗಡ) - ಆನಂದ ಭೈರವಿ ರಾಗದಿಂದ ನಮ್ಮ ಮನಕ್ಕೆ ಆನಂದವನ್ನುಂಟು ಮಾಡಿದನು.
  • ಶಿವ ಕುಮಾರ್(ಪೋಲಿಸನ ಪುತ್ರ) - ತನ್ನ ಗೌಡ್ರು ಶೈಲಿಯಲ್ಲಿ ನಾಗರಹಾವು ಚಿತ್ರದ ತುಣುಕೊಂದನ್ನು ನಟಿಸಿ ತೋರಿಸಿದ( क्या रे बुल बुल ಮಾತಾಡಕಿಲ್ವ )
ನಮ್ಮ ಚಿಕ್ಕಪ್ಪನವರೆನೋ ರೈಲು ಹತ್ತಿಸಿ ರೈಟ್ ರೈಟ್ ಎನ್ನಲು ಸಿದ್ಧವಿದ್ದರು, ಆದರೆ ಹಾಳಾದ್ದು ಆ ಗೂಡ್ಸ್ ಗಾಡಿ ಅನಿವಾರ್ಯ ಕಾರಣಗಳಿಂದ 7 ಗಂಟೆಗೆ ಬರಬೇಕಿದ್ದದ್ದು 10 ಗಂಟೆಯಾದ್ರೂ ಬರಲೇ ಇಲ್ಲ. ನಂತರ ಚಿಕ್ಕಮ್ಮ ಮಾಡಿದ ಉಪ್ಪಿಟ್ಟು, ದೋಸೆಯನ್ನು ತಿಂದು ಮಂಜರಾಬಾದ್ ನ ಕೋಟೆ ನೋಡಲು ಹೊರಟೆವು.
ಸಕಲೇಶಪುರ ರೈಲ್ವೆ ನಿಲ್ದಾಣದ ಬಳಿ - ಚಿಕ್ಕಪ್ಪನೊಟ್ಟಿಗೆ
ಸಕಲೇಶಪುರ - ಚಿಕ್ಕಮ್ಮನೊಟ್ಟಿಗೆ


11 ರ ಹೊತ್ತಿಗೆ ಕೋಟೆ ತಲುಪಿ ಕೋಟೆಯ ಭವ್ಯತೆಯನ್ನು ನೋಡುತ್ತಾ, ನಕ್ಷತ್ರ ಮಾದರಿಯ ಆ ಕೋಟೆಯ ನೀಲನಕ್ಷೆಯನ್ನು ಗೋಪುರದ ಕೆಳ ಬದಿಯಲ್ಲಿ ನಮ್ಮ ಬಿಟ್ಟಿ ಮಾರ್ಗದರ್ಶಿ( ಇವನೇನೋ ಗೈಡ್ ಮಾಡಿದ್ದಕ್ಕೆ ದುಡ್ಡು ಕೇಳ್ದ ನಾವು ಹಂಗೆ ಜೈ ಅಂದ್ಬಿಟ್ವಿ) ತೋರಿಸಿ ಕೊಟ್ಟನು. ನಂತರ ಟಿಪ್ಪು ಸುಲ್ತಾನನ ಸುರಂಗ ಮಾರ್ಗ, ರಾಜ ಮನೆತನದವರು ಉಪಯೋಗಿಸುತ್ತಿದ್ದ ಸಂಡಾಸ್(TOILET) ಅನ್ನು ತೋರಿಸಿದ.(ಪುಣ್ಯಕ್ಕೆ ಪ್ರಾಯೋಗಿಕವಾಗಿ ತೋರಿಸಿ ಗೌಡ್ರು ದರ್ಬಾರ್ ಎನ್ನಲಿಲ್ಲ! ). ಆಗಿನ ತಾಂತ್ರಿಕತೆಗೆ ಮಾರುಹೋದ ನಾವು ಮನದಲ್ಲೇ ಆಗಿನ ಅಭಿಯಂತರರ( Engineer's) ಚಾತುರ್ಯವನ್ನು ಶ್ಲಾಘಿಸುತ್ತಾ, ಕುಕ್ಕೆಯತ್ತ ಹೊರಟು ಕುಮಾರಧಾರಾ ನದಿಯಲ್ಲಿ ಮನಸೋ ಇಚ್ಛೆ ಮಿಂದು, ಈಜಾಡಿ, ಕುಮಾರ ಕೃಪಾ ಹೋಟೆಲ್ ನಲ್ಲಿ ಭೋಜನ ಮುಗಿಸಿ ಚಾರಣ ಶುರುಮಾಡುವಷ್ಟರಲ್ಲಿ ಸಂಜೆ 4 ಗಂಟೆ.
ಮಂಜರಾಬಾದ್ ಕೋಟೆ


ಮಂಜರಾಬಾದ್ ಕೋಟೆ- ನೀಲ ನಕ್ಷೆ

ಮಂಜರಾಬಾದ್ ಕೋಟೆ - ಪ್ರವೇಶ ದ್ವಾರ

ಮಂಜರಾಬಾದ್ ಕೋಟೆ - ಬಾವಿ
 

ನಮ್ಮ BACKPACKಗಳನ್ನು ಹೊತ್ತು ಸುಂದರ ಪ್ರಕೃತಿ ಮಾತೆಯ ಮಡಿಲ ಕಂದಮ್ಮಗಳಾಗಿ ಪರ್ವತಾರೋಹಣವನ್ನು ಕೈಗೊಂಡೆವು. ದಾರಿಯಲ್ಲಿ ಕಂಡ ವಿವಿಧ ರೀತಿಯ ಮರಗಳನ್ನು ನೋಡುತ್ತಾ, ಅದರ ಮೇಲೆ ಫಲಕದಲ್ಲಿ ಸೂಚಿಸಿದ್ದ ಹೆಸರುಗಳನ್ನು ಓದುತ್ತಾ, ಉಸ್ಸು ಬಿಸ್ಸು ಎಂದು ಏದುಸಿರು ಬಿಟ್ಟು, ಮಧ್ಯೆ ಮಧ್ಯೆ ಸುಧಾರಿಸಿಕೊಳ್ಳುತ್ತಾ ಮೇಲೆರುತ್ತಿದ್ದೆವು. ಪಡುವಣ ಬಾಂದಳದಲ್ಲಿ ಮುಳುಗುತ್ತಿದ್ದ ಕೆಂಪು ಭಾಸ್ಕರನನ್ನು, ಆಗ ತಾನೇ ನಗು ನಗುತ್ತಾ ಮೇಲೇರುತ್ತಿದ್ದ ಚಂದಿರನನ್ನು ಏಕ ಕಾಲದಲ್ಲಿ ಕಂಡು ಕಂಗಳಲ್ಲೇ ಸೆರೆಹಿಡಿಯುತ್ತಾ ಭಟ್ಟರ ಮನೆ ತಲುಪುವಷ್ಟರಲ್ಲಿ ಸಂಜೆ 6:45.

ಭಟ್ಟರ ಮನೆಗೆ ನಡೆದರೆ ಅಲ್ಲಿ ತಣ್ಣನೆಯ ಮಜ್ಜಿಗೆ ನಮ್ಮ ತನು,ಮನ ಎರಡನ್ನೂ ತಣಿಸಿತು. ನಂತರ ಊಟದ ಹೊತ್ತಿನವರೆಗೂ ಗಾನ ಬಜಾನ- ಅಂತ್ಯಾಕ್ಷರಿ ಕಾರ್ಯಕ್ರಮ ಶುರು. ಎರಡೂ ತಂಡಗಳೂ ಪಾಟಿ ಸವಾಲನ್ನು ಅತ್ಯುತ್ಸಾಹದಲ್ಲಿ ಸ್ವೀಕರಿಸುತ್ತಿದ್ದವು. ಕನ್ನಡ, ತೆಲುಗು, ಹಿಂದಿ ಚಲನಚಿತ್ರಗೀತೆಗಳೂ, ಭಾವಗೀತೆಗಳೂ ಎಲ್ಲರ ಬಾಯಲ್ಲೂ ನಲಿದಾಡಿತು. ಬಂಗಾರಪ್ಪನವರಂತೆ ಪಕ್ಷಾಂತರ ಮಾಡಿದ ವಂಶಿ, ನಮ್ಮ ತಂಡ ತೊರೆದು ವಿರೋಧ ಪಕ್ಷವನ್ನು ಸೇರಿಬಿಟ್ಟ ಮತ್ತು ತೆಲುಗು ಬರುವುದಿಲ್ಲವೆಂದು ಹೇಳಿಕೊಂಡಿದ್ದ ಶೇಖರ್ ತೆಲುಗು ಚಿತ್ರಗಳ ಹಾಡುಗಳನ್ನು ಮೇಲೆ ಮೇಲೆ ಹಾಡಿ ತಾನು LIER ಎಂಬುದನ್ನು ಸಾಬೀತುಪಡಿಸಿಕೊಂಡ.
ಭಟ್ಟರು ಮಾಡಿ ತಂದಿಟ್ಟ ಬಿಸಿ ಬಿಸಿ ಅಡುಗೆಯನ್ನು ( ಅನ್ನ , ಹುಳಿ- ಸಾಂಬಾರ್, ಮಜ್ಜಿಗೆ, ಉಪ್ಪಿನಕಾಯಿ) ಭರ್ಜರಿಯಾಗಿ ತಿಂದು ಮಲಗುವಷ್ಟರಲ್ಲಿ ಸಮಯ 10:30.

ನವೆಂಬರ್ 18:
 ಬೆಳಗ್ಗೆ 5:30ಕ್ಕೆ ಒಲ್ಲದ ಮನಸ್ಸಿನಿಂದ ಎದ್ದು, ಆ ನಡುಗುವ ಚಳಿಯಲ್ಲಿ ಪ್ರಾತರ್ವಿಧಿಗಳನ್ನು ಮುಗಿಸಿ, ಪುಷ್ಪಗಿರಿಯೆಡೆಗೆ ಹೊರಡುವಷ್ಟರಲ್ಲಿ 6:30. ಮಾರ್ಗ ಮಧ್ಯೆ ಅರಣ್ಯ ಇಲಾಖೆಯಲ್ಲಿ ಹಣ ಕಟ್ಟಿ, ಚಾರಣಕ್ಕೆ ಅನುಮತಿ ಪಡೆದು, ನಡೆದು ಹೋಗುತ್ತಿದ್ದಾಗ ಒಂದು ಪರ್ಸ್ ಕಾಣಿಸಿತು. ತೆಗೆದು ನೋಡಿದಾಗ ಅದರಲ್ಲಿ ಹಣದ ಹೊರತು ಆ ಪರ್ಸಿನ ಮಾಲೀಕನ ಬಗೆಗೆ ಯಾವುದೇ ಗುರುತಿರಲಿಲ್ಲ. 8 45ರ ಹೊತ್ತಿಗೆ ಕಲ್ಲು ಮಂಟಪ ಸೇರಿ,ತಂಡದೊಂದಿಗೆ ಚರ್ಚಿಸಿ BASC ನಿಧಿಗೆ ಅದನ್ನು ಕೊಡೋಣವೆಂದು ತೀರ್ಮಾನಿಸಿದೆವು. ಬುತ್ತಿ ಕಟ್ಟಿಸಿಕೊಂಡು ತಂದಿದ್ದ ಚಪಾತಿಯನ್ನು ತಿಂದು ಪುಷ್ಪಗಿರಿಯ ಹಾದಿ ಹಿಡಿದೆವು. ದಾರಿಯಲ್ಲಿ ಹಾಡು ಹಾಡುತ್ತಾ, ಜಿಗಣೆಯ ಸವಿ ಮುತ್ತುಗಳನ್ನು ಸ್ವೀಕರಿಸುತ್ತಾ, ಕಾಡು ಹಾದಿಯಲ್ಲಿ ಮುಂದುವರಿದೆವು. ನಾನು, ನಾಗೇಂದ್ರ ಸ್ವಲ್ಪ ಸಮಯ ಕಾದು, ಯಾರೂ ಬಾರದಿದ್ದನ್ನು ಕಂಡು, ಕಲ್ಲಿನ ಮೇಲೆ ಬಾಣದ ಗುರುತನ್ನು ಅಚ್ಚು ಮೂಡಿಸುತ್ತಾ ಸಾಗಿದೆವು. ಅಲ್ಲಿ ಮರಳಿ ಬರುತ್ತಿದ್ದ ಬೇರೊಂದು ತಂಡವನ್ನು ಕೇಳಿದಾಗ, ಆ ತಂಡವು ನಮ್ಮ ತಂಡದ ಇತರೆ ಸದಸ್ಯರು ಆಗಲೇ ಪುಷ್ಪಗಿರಿಯನ್ನು ತಲುಪಿರುವುದಾಗಿ ಹೇಳಿದರು. ನಮಗೆ ಆಗ ತಿಳಿಯಿತು ನಾವು ಸೋಮವಾರಪೇಟೆಯಿಂದ ಪುಷ್ಪಗಿರಿಗೆ ಚಾರಣ ಮಾಡುವ ದಾರಿಯಲ್ಲಿದ್ದೇವೆಂದು. ನಾವು ಬೇಗ ನಡೆದು ಶಿಖರ ಬಿಂದು (PEAK) ತಲುಪುವಷ್ಟರಲ್ಲಿ ಗಡಿಯಾರ 12 ಗಂಟೆ ತೋರಿಸುತ್ತಿತ್ತು. ಅಲ್ಲಿ ಶಿವಲಿಂಗವನ್ನು ನೋಡಿ " ಬ್ರಹ್ಮ ಮುರಾರಿ ಸುರಾರ್ಚಿತ" ಎಂದು " ಲಿಂಗಾಷ್ಟಕ" ವನ್ನು ಶುರು ಮಾಡಿದರೆ ಅದನ್ನು ಕೇಳಿದ  ತಂಡದ ಇತರೆ ಸದಸ್ಯರು ನಮ್ಮನ್ನು ಸೇರಿ, ತಮ್ಮ ದನಿಗೂಡಿಸಿದರು. ಅದೊಂದು ಸಮೂಹ ಗಾಯನದಂತಾಗಿ ನಾನಂತೂ ಬಹಳವೇ ಖುಷಿಪಟ್ಟೆ.
ಕುಮಾರ ಪರ್ವತ-ಕಲ್ಲು ಮಂಟಪ

ಕುಮಾರ ಪರ್ವತ 

ಕುಮಾರ ಪರ್ವತ  


ಕುಮಾರ ಪರ್ವತ - ಮನುಷ್ಯನ ವಿಕಾಸ(ಶ್ರೀಹರ್ಷನ ಬುದ್ದಿಮತ್ತೆ)
 

ಅಲ್ಲಿಂದ ಮರಳಿ ಭಟ್ಟರ ಮನೆಯ ದಾರಿ ಹಿಡಿದೆವು. ಈಗ ಹರ್ಷ ತಾನು ತಂದಿದ್ದ ಬ್ರೆಡ್ಡನ್ನು ಕೊಟ್ಟರೆ ಎಲ್ಲರೂ ಅವನಿಗೂ ಸಹ ಉಳಿಯದಂತೆ ಗುಳುಂ ಸ್ವಾಹಾ ಮಾಡಿಬಿಟ್ಟರು. ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ಭಟ್ಟರ ಮನೆ ಸೇರಿ, ಊಟವನ್ನು ಮುಗಿಸಿ, ಸ್ವಲ್ಪ ಹೊತ್ತು ವಿರಮಿಸಿಕೊಂಡೆವು. ನನ್ನ ಬಳಿಯಿದ್ದ ಟಾರ್ಚ್ ಅನ್ನು ಯಾರೋ ಕೇಳಿ ಪಡೆದರು. ಅದನ್ನು ನೋಡಿದ ನಾಗೇಂದ್ರ ಅದು ಪಲ್ಲವಿಯಷ್ಟೇ ದಪ್ಪಗಿದೆ ಎಂದ.(ನಾನು ನಿದ್ದೆ ಬಾರದಿದ್ದರೂ ಬಂದವಳಂತೆ ನಟಿಸುತ್ತಾ ಮಲಗಿಬಿಟ್ಟೆ).
ತಮ್ಮ ಮಂಡಿ  ನೋವಿನಿಂದಾಗಿ ಚಾರಣವನ್ನು ಅರ್ಧಕ್ಕೆ ನಿಲ್ಲಿಸಿ, ಭಟ್ಟರ ಮನೆ ಸೇರಿದ್ದ ಶ್ರೀಕಾಂತ್ ರವರೊಟ್ಟಿಗೆ ನಾವು ಮೊದಲನೇ ತಂಡ ಹೊರಟೆವು. ಎರಡನೇ ತಂಡ ಸ್ವಲ್ಪ ತಡವಾಗಿ ಹೊರಟು ನಮ್ಮನ್ನು ಸೇರುವುದಾಗಿ ಹೇಳಿದರು.

ದಾರಿಯ ಮಧ್ಯೆ ಅಣ್ಣಾ ಬಾಂಡ್ ಶೇಖರ್ ಅನೇಕ ಪ್ರವಾಸೀ ತಾಣಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು ಮತ್ತು ಏನಾದರೂ ಸಹಾಯ ಬೇಕಿದ್ದಲ್ಲಿ ನೀಡಲು ಸಿದ್ಧವೆಂದೂ ಹೇಳಿದರು. ಈತನ ಸುತ್ತುವ ಆಸಕ್ತಿಯನ್ನು ಕಂಡು ನಾನು ಆಶ್ಚರ್ಯ ಪಟ್ಟರೆ ಸುಧಿ ಅಂತೂ ಕೇಳೇಬಿಟ್ಟ- ನಿಮ್ಮ ಸಮಯ ನಿರ್ವಹಣೆ( TIME MANAGEMENT) ಬಗ್ಗೆ ಹೇಳಿ ಅಂತ. ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿ 1.6 ವರ್ಷವಾಗಿದೆ. ಅಷ್ಟರಲ್ಲೇ ಭಾಗಶಃ ಕರ್ನಾಟಕದ ಎಲ್ಲಾ ಜಾಗಗಳಿಗೂ ಭೇಟಿ ಕೊಟ್ಟಿದ್ದಾರೆ( ಆಡು ಮುಟ್ಟದ ಸೊಪ್ಪಿಲ್ಲ ಗಾದೆಯ ತರಹ ಶೇಖರ್ ನೋಡಿರದ ಸ್ಥಳವಿಲ್ಲ ಎನ್ನಬಹುದೇನೋ!)
ಸುಮಾರು ಸಂಜೆ 6:45ರ ಹೊತ್ತಿಗೆ ಚಾರಣ ಮುಗಿಸುವಲ್ಲಿ ಕಾಲುಗಳು ಪದ ಹಾಡುತ್ತಿತ್ತು. ಅಲ್ಲಿ ಒಂದು ಪ್ರವಾಸಿ ಮಂದಿರದ ಕೋಣೆಯನ್ನು ಬಾಡಿಗೆಗೆ ಪಡೆದು, ನಮ್ಮ ಸ್ನಾನ ಮುಗಿಸಿ, ಪೂರ್ವ ನಿಯೋಜನೆಯಂತೆ ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆಯುಟ್ಟು, ದೇವಸ್ಥಾನದ ಕಡೆಗೆ ನಡೆದೆವು. ಮಾನ ರಕ್ಷಣೆಯ ಸಲುವಾಗಿ ಹರ್ಷ ಪಂಚೆಗೆ ಬೆಲ್ಟ್ ಕಟ್ಟಿದ್ದನ್ನು ಕಂಡು ವಿನೂತ್ನ ನಗುತ್ತಿದ್ದಳು.
8:15ಕ್ಕೆ ದೇವಸ್ಥಾನವನ್ನು ಪ್ರವೇಶಿಸಿದ ನಾವು, "ಶ್ರೀ ಸುಬ್ರಮಣ್ಯ" ನ ದರ್ಶನಗೈದು, ಸಕಲರಿಗೂ ಒಳಿತನ್ನು ಮಾಡೆಂದು ಬೇಡಿ, ಅಲ್ಲೇ ಪ್ರಸಾದ(ಭೋಜನ)ವನ್ನು ಸ್ವೀಕರಿಸಿ ಹೊರಬರುವಷ್ಟರಲ್ಲಿ ಸಮಯ 9.
ಎಲ್ಲರಿಂದಲೂ ಮುಂಗಡವಾಗಿ ಪಡೆದಿದ್ದ ಹಣದಲ್ಲಿ ಇನ್ನೂ ಸಾಕಷ್ಟು ಉಳಿದಿತ್ತಾದ್ದರಿಂದ ಎಲ್ಲರಿಗೂ ICE CREAM with FRUIT SALAD ತಿನ್ನಲು ಮನಸ್ಸಿದೆಯಾ ಎಂದು ಕೇಳಿದರೆ ತಕ್ಷಣವೇ ಎಲ್ಲರೂ ಕೈ ಎತ್ತಿ ತಮ್ಮ ಸಮ್ಮತಿಯನ್ನು ಸೂಚಿಸಿದರು. ಆಗಲೇ TT ಯ ಬಳಿ ತೆರಳುತ್ತಿದ್ದ ವಿನೂತ್ನ, ಶೇಖರ್ & ವಂಶಿಯನ್ನು ICE CREAM ತಿನ್ನಲು ಬರುವಿರಾ ಎಂದು ಕೇಳಿ Phone Cut ಮಾಡಿ, ಹೋಟೆಲ್ ತಲುಪುವಷ್ಟರಲ್ಲಿ ಅವರು ನಮಗೂ ಮುಂಚೆಯೇ ಅಲ್ಲಿ ಪ್ರತ್ಯಕ್ಷ! ( ICE CREAM ತಿನ್ನಲು ಇವರು PT ಉಷಾರನ್ನೂ ಮೀರುಸ್ತಾರೆ ಬಿಡೀಪ್ಪ!!)
ನಾನಿನ್ನೂ ನಿಧಾನಕ್ಕೆICE CREAM ಅನ್ನು ಸವಿದು ಮೆಲ್ಲುತ್ತಿದ್ದೆ. ಉದುರುತ್ತಿದ್ದ ಕಚ್ಚೆ ಪಂಚೆಯನ್ನೂ ಲೆಕ್ಕಿಸದೆ ಹಾಗೆ ಹಿಡಿದು ಯದು ಓಡಿ ಬಂದ. ಪಲ್ಲವಿ ನಮಗೆ ಇನ್ನೊಂದು GUD BUD ಬೇಕು ಎಂದು ಸರಿ ಅಮೋಘ 2ನೇ ಬಾರಿಗೆ ಎಂದು ಎಲ್ಲರೂ GUD BUD ತಿಂದು TT ಬಳಿ ತೆರಳಿ ಕುಕ್ಕೆ ಬಿಡುವಷ್ಟರಲ್ಲಿ ಸಮಯ 11.
KP ಗೆ ಬೈ ಬೈ ಹೇಳಿ ರಾಜಧಾನಿಯನ್ನು ಬಂದು ಸೇರಿದಾಗ ಗಡಿಯಾರ 5:45 ತೋರಿಸುತ್ತಿತ್ತು.

ನನ್ ಕಡೆಯಿಂದ ವಿಶೇಷ ಧನ್ಯವಾದಗಳು:-

  • ಭಟ್ಟರು ಮತ್ತು ಕುಟುಂಬ,  ಚಿಕ್ಕಪ್ಪ & ಚಿಕ್ಕಮ್ಮ : ಅನ್ನದಾತೋ ಸುಖೀಭವ
  • ನಾಗೇಂದ್ರ : Tarpaulin ಅನ್ನು ಹೊತ್ತು ತಂದು, ಅರಣ್ಯ ಇಲಾಖೆಯಲ್ಲಿ ಮಾತಾಡಿ ಹಣ ಕಟ್ಟುವ ಮೊತ್ತವನ್ನು ಕಡಿಮೆ ಮಾಡಿಸಿದ್ದಕ್ಕಾಗಿ.
  • ಸುರೇಶ್ : ಚಾರಣದ ರೂಪುರೇಷೆಯನ್ನು ನಿರ್ಮಿಸಲು ಅನುವಾಗಿ, Tarpaulin ಅನ್ನು ಹೊತ್ತು ತಂದದ್ದಕ್ಕಾಗಿ.
  • ಶಿವ ಕುಮಾರ್:  INDEMNITY BOND ಮುದ್ರಣ ಪ್ರತಿ(Print Out)ಯನ್ನು ತಂದುಕೊಟ್ಟದ್ದಕ್ಕಾಗಿ.
  • ವಿನೂತ್ನ - ಅನಾರೋಗ್ಯವಿದ್ದೂ, ತನ್ನ ಮನೋ ಸಾಮರ್ಥ್ಯದಿಂದ ಚಾರಣವನ್ನು ಪೂರ್ಣಗೊಳಿಸಿದ್ದಕ್ಕಾಗಿ.
  • ಅನಾಮಿಕ( ಪರ್ಸ್ ಕಳೆದುಕೊಂಡವರು)  -BASC ನಿಧಿಗಾಗಿ ಪರೋಕ್ಷವಾಗಿ ಧನ ಸಹಾಯ ಮಾಡಿದ್ದಕ್ಕಾಗಿ.
  • ಇತರೆ ಎಲ್ಲಾ ಸಹ ಚಾರಣಿಗರು - ಎಳ್ಳಷ್ಟೂ ನಖರಾ ಮಾಡದೆ ಅತ್ಯುತ್ತಮ ರೀತಿಯಲ್ಲಿ ಸಹಕರಿಸಿದ್ದಕ್ಕಾಗಿ. 
ಮಾಹಿತಿ:

ಸ್ಥಳ: ಕುಮಾರ ಪರ್ವತ ( KUMARA PARVATA-KP ) - ಸುಳ್ಯ ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ.

ಚಾರಣ ಶುರು ಮಾಡುವ ಸ್ಥಳ: ಕುಕ್ಕೆ/ ಸೋಮವಾರಪೇಟೆ

ದೂರ: ಬೆಂಗಳೂರಿನಿಂದ  282 ಕಿ.ಮೀ. (
ಕುಕ್ಕೆ) / 234 ಕಿ.ಮೀ( ಸೋಮವಾರಪೇಟೆ )
 

ತಲುಪುವ ಬಗೆ: ಸ್ವಂತ ವಾಹನ/ ಬಸ್ಸು/ರೈಲು( ಸುಬ್ರಮಣ್ಯ ರೋಡ್ ವರೆಗು)

ಮಾರ್ಗ: 

ಬೆಂಗಳೂರು( NH 73 Highway)-ಕುಣಿಗಲ್-ಚನ್ನರಾಯಪಟ್ಟಣ-ಸಕಲೇಶಪುರ-ಮಂಜರಾಬಾದ್ ಕೋಟೆ-ಕುಕ್ಕೆ    
ಬೆಂಗಳೂರು ( NH 73 Highway) - ಕುಣಿಗಲ್ - ಚನ್ನರಾಯಪಟ್ಟಣ - ಹೊಳೆನರಸೀಪುರ - ಸೋಮವಾರಪೇಟೆ

ಭಟ್ಟರ ಮನೆ - 1 ಊಟಕ್ಕೆ 80 ರೂ.
ಅರಣ್ಯ ಇಲಾಖೆಯಲ್ಲಿ ಚಾರಣ ಮಾಡಲು - ತಲಾ 200 ರೂ. 

ಕುಮಾರ ಧಾರಾ ನದಿಯಲ್ಲಿ ಸ್ನಾನ ಮಾಡಿದ ನಂತರ ಬಟ್ಟೆ ಬದಲಿಸಲು ಕಬ್ಬಿಣದ ಸಣ್ಣ ಕೋಣೆಗಳಿವೆ.